Saturday, January 19, 2008

ಮದುವೆ

ಸಂಸ್ಕೃತದಲ್ಲಿ ಹೀಗೊಂದು ಶ್ಲೋಕವಿದೆ:

ಕನ್ಯಾ ವರಯತೇ ರೂಪಮ್,ಮಾತಾ ವಿತ್ತಮ್ ಪಿತಾ ಶ್ರುತಮ್ |
ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮ್ ಇತರೇ ಜನಾಃ ||

ಅರ್ಥ: ಕನ್ಯೆಯು ವರನ ರೂಪವನ್ನು ನೋಡಿದರೆ,ತಾಯಿಯು ಅವನ ಸಂಬಳ,ಅವನ ಆಸ್ತಿ-ಪಾಸ್ತಿಗಳ ಬಗ್ಗೆ ವಿಚಾರಿಸುತ್ತಾಳೆ. ತಂದೆಯು ಅವನ ಓದು,ಸಂಸ್ಕಾರದ ಬಗ್ಗೆ ಕೂಲಂಕಷವಾಗಿ ನೋಡುತ್ತಾನೆ.ಬಾಂಧವರು ಕುಲದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದರೆ ಮಿಕ್ಕವರೆಲ್ಲರೂ ಭೋಜನಕ್ಕೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ಮದುವೆ ಅನ್ನುವುದು ಹೆಣ್ಣು ಗಂಡುಗಳ ಮತ್ತು ಅವರ ಪರಿವಾರಗಳ ಮೇಲೆ ಇರುವ ಒಂದು ಗುರುತರವಾದ ಜವಾಬ್ದಾರಿ.ಆದ್ದರಿಂದ ಈ ಶ್ಲೋಕವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಅದ್ದೂರಿಯಾಗಿ ಮಾಡುವ ಮದುವೆಗಳಲ್ಲಿ ನಡೆಯುವ ಅವಗಢಗಳ ಬಗ್ಗೆ ನನಗೆ ಖೇದವಿದೆ.

ಮದುವೆಯಲ್ಲಿ ಸಾಮನ್ಯವಾಗಿ ಕಾಣುವ ದೃಶ್ಯವಿದು.ಮುಹೂರ್ತಕ್ಕೆ ನಾವು ಹೋದರೆ ಛತ್ರ ಖಾಲಿ!!!! ತಲೆಗಳನ್ನು ಎಣಿಸಿದರೆ ಹತ್ತೋ ಹನ್ನೆರಡೋ ಅಷ್ಟೇ !!ಹನ್ನೆರಡು ಗಂಟೆಗೆ ಸರಿಯಾಗಿ ಛತ್ರದ ತುಂಬೆಲ್ಲ ಜನ ಕಿಕ್ಕಿರಿದು ಊಟಕ್ಕಾಗಿ ಕಾಯುತ್ತಿದ್ದರು ! ಹನ್ನೆರಡು ಜನ ಮಾತ್ರ ತಾಳಿ ಕಟ್ಟಿದನ್ನು ವೀಕ್ಷಿಸಿದ್ದು !!!

ಇನ್ನೊಂದು ಮದುವೆಯಲ್ಲಿ ನಡೆದ ಪ್ರಸಂಗವಿದು.ಜೀರಿಗೆ ಬೆಲ್ಲದ ಸಮಯ ಬಂತು. ವೀಡಿಯೋನವರು,"ವೀಡಿಯೋನಲ್ಲಿ ಚೆನ್ನಾಗಿ ಬೀಳತ್ತೆ, ಬಣ್ಣದ ಸಣ್ಣ ಸಣ್ಣ Thermocole ಗುಂಡುಗಳನ್ನು ಹಾಕಿಸಿ" ಎಂದರು. ಪುರೋಹಿತರು ಇದಕ್ಕೆ ಆಕ್ಷೇಪಿಸಿದರಾದರೂ ಎರಡೂ ಕಡೆಯ ಮನೆಯವರು ಅವರ ಮಾತು ಕೇಳದಿದ್ದದ್ದು ನಮಗೆ ಆಶ್ಚರ್ಯ ತಂದಿತು !! ಬದಲಾಗಿ ಪುರೋಹಿತರನ್ನು ಅವರು "ವೀಡಿಯೋದಲ್ಲಿ ಬಣ್ಣ ಮುಖ್ಯ.ಅವರು ಹೇಳಿದ ಹಾಗೇ ಮಾಡೋಣ.ಅಕ್ಕಿಯನ್ನು ಹಾಕಿಸಿದ ಮೇಲೇ ಬಣ್ಣದ ಗುಂಡುಗಳನ್ನು ಹಾಕಿಸಿದರೆ ಸಂಪ್ರದಾಯಕ್ಕೇನು ಧಕ್ಕೆ ಬರುವುದಿಲ್ಲವಲ್ಲ ? ಮತ್ತೆ ಇಷ್ಟೋಂದು ಸಂಪ್ರದಾಯ ಯಾಕೆ ? ಎಲ್ಲವನ್ನು ಮೊಟಕುಗೋಳಿಸಿ ತಾಳಿ ಕಟ್ಟಿಸಿಬಿಡಿ ! " ಎಂದು ಅವರ ಬಾಯಿ ಮುಚ್ಚಿಸಿದರು !!! ಬರೀ ಆಡಂಬರದ ಮದುವೆ ಬೇಕಿದ್ದರೆ,ಪುರೋಹಿತರನ್ನು ಕರೆದು ಈ ರೀತಿ ಅಂದು ಶಾಸ್ತ್ರಕ್ಕೆ ಅವಮಾನ ಮಾಡುವುದು ಯಾಕೆ ? ಶಾಸ್ತ್ರವನ್ನು ಆಚರಣೆ ಮಾಡುವುದು ಶೋಕಿಗಾಗಿ ಅಲ್ಲ.ಅದಕ್ಕೆಒಂದು ಕಾರಣವಿದೆ,ಕಲ್ಪವಿದೆ,ವಿಧಿ ಇದೆ ಅಲ್ಲವೇ ? ಮದುವೆ fast food ಅಲ್ಲ, ಎಲ್ಲವನ್ನು ಮೊಟಕುಗೊಳಿಸೋಕೆ !!!


ಹಿಂದೆ ನಡೆದ ನನ್ನ ಮತ್ತೊಬ್ಬ ಸ್ನೇಹಿತೆಯ ಮದುವೆಯಲ್ಲಿ ನಡೆದ ಪ್ರಸಂಗ ಇದು.ಮುಹೂರ್ತ ಸಮೀಪಿಸುತ್ತಿದ್ದಂತೆ ಪುರೋಹಿತರು "ಸುಲಗ್ನ ಸಾವಧಾನ,ಸುಮುಹೂರ್ತಃ ಸಾವಧಾನ" ಅಂದರು.ಹುಡುಗಿಯ ತಾಯಿ ತಂದೆ ಆದಿಯಾಗಿ ಅಲ್ಲಿ ಉಪಸ್ಥಿತರಿದ್ದವರೆಲ್ಲರೂ ಮಾತಲ್ಲಿ ತಲ್ಲೀನರಾಗಿದ್ದರು.ಹುಡುಗನಿಗೆ ಭಾರದ ಪೇಟದ ಚಿಂತೆಯಾದರೆ ಹುಡುಗಿಗೆ make up ದು !!! ಸಾವಧಾನ ಪದಕ್ಕೆ ಅಲ್ಲಿ ಅರ್ಥವೇ ಇರಲಿಲ್ಲ !!! ಪುರೋಹಿತರು ಅವರೆಲ್ಲರನ್ನು ಕೂಗಿ,ಸಲ್ಪ ಏಕಾಗ್ರತೆ ವಹಿಸಲು ಬೇಡಿಕೊಂಡರು ಪಾಪ !!!! ನಂತರ ತಾಳಿಗೆ ಪೂಜೆ ಮಾಡಿ ಎಲ್ಲರ ಆಶೀರ್ವಾದ ತೆಗೆದುಕೊಂಡು ಬರಲು ಹೇಳಿದರು. ಎಲ್ಲರ ಬಳಿಗೂ ತಾಳಿಯನ್ನು ತಂದಾಗ ಅವರವರ ಮಾತುಕತೆ, ಚರ್ಚೆಯ ಕೆಲವು ತುಣುಕುಗಳು ಇಲ್ಲಿವೆ -

"ನೋಡ್ರಿ ನಾವು real estate ನಲ್ಲಿ invest ಮಾಡಿದ್ವಿ....ಅನ್ಯಾಯ ಬೆಲೆಗಳು ಇಳಿದು ಹೋದವು...(ಅಷ್ಟೊತ್ತಿಗೆ ತಾಳಿಯ ತಟ್ಟೆ ಬರತ್ತೆ) ಓಹ್ ತಾಳಿ ! (ಅದನ್ನು ಎಡಗೈಲಿ ಮುಟ್ಟಿಕೊಂಡು ಮಾತನ್ನು ಮುಂದುವರಿಸುತ್ತ)...ಹಾಳಾಗೋಯ್ತು !!!

"ಎನ್ರಿ ನೀವು ಅವತ್ತು ನಮ್ಮ ಮಾವನ ಶ್ರಾದ್ಧಕ್ಕೆ ಬರಲೇ ಇಲ್ಲ ? ನಾವೆಲ್ಲ ನೆನಪೇ ಇಲ್ಲವೇ ..? (ತಾಳಿಯ ಆಗಮನ)...ಬಹಳ ಅನ್ಯಾಯ !!"

" ದಮ್ರೋಟಿನಲ್ಲಿ ಜಿಡ್ಡು ಜಾಸ್ತಿ...ಪಾನಕ ಸರಿಗೆ ಇಲ್ಲ...ಸಕ್ಕರೆ ಕಮ್ಮಿ..." (ತಾಳಿಯನ್ನು ಪರೀಕ್ಷಿಸುತ್ತ...) ಬಹಳ ತೆಳು ತಾಳಿ ! ಬೇಗ ಸವೆದು ಹೋಗುತ್ತೆ !"

ಇವು ಸಭಿಕರು, ಅಲ್ಲಲ್ಲ, ವಧು ವರರ "ಹಿತ ಚಿಂತಕರು " ತಾಳಿಗೆ ನೀಡುವ ಆಶೀರ್ವಾದಗಳು !!!

ಬೇಕೆ ಇವೆಲ್ಲ ಮದುವೆಯಲ್ಲಿ ?

ನನಗೆ ಇದೆಲ್ಲ ನೋಡಿದರೆ ಮದುವೆಯ ಉದ್ದೇಶದ ಸಾರ್ಥಕ್ಯದ ಬಗ್ಗೆಯೇ ಪ್ರಶ್ನೆಗಳು ಹುಟ್ಟುತ್ತವೆ. ಮದುವೆ ಅನ್ನೋದು ಎರಡು ಜೀವಗಳ,ಪರಿವಾರಗಳ ಮಿಲನ.ಒಂದು ಆಟಕ್ಕೆ ತಂಡವನ್ನು ಕಟ್ಟಬೇಕಾದರೆ ಆಟಗಾರರನ್ನು ಹೇಗೆ ತಯಾರು ಮಾಡುತ್ತಾರೋ ಹಾಗೆಯೇ ಮಂತ್ರಗಳಲ್ಲಿ ಈ ನೂತನ,ಪವಿತ್ರ ಬಂಧನದ ಉದ್ದೇಶ,ಮಹತ್ವ,ಮತ್ತು ಗಂಡು-ಹೆಣ್ಣುಗಳಿಗೆ ಇರುವ ಜವಾಬ್ದಾರಿಯನ್ನು ವಧು ವರರಿಗೆ ತಿಳಿಸಿಕೊಟ್ಟು, ಅವರನ್ನು ಮುಂದಿನ ಜೀವನಕ್ಕೆ ತಯಾರು ಮಾಡುವುದೇ ಈ ಮಂತ್ರಗಳ ಹಿಂದಿರುವ ಅರ್ಥ.ಇದು ಅವರವರ ಸಂಪ್ರದಾಯಗಳ ಕಟ್ಟಳೆಗೆ ಒಳಪಟ್ಟವು. ಕೆಲವು ಪುರೋಹಿತರಂತೂ ಪ್ರತಿಯೊಂದು ಮಂತ್ರದ ಅರ್ಥವನ್ನು ತಿಳಿಸಿ ಮದುವೆಯನ್ನು ಮಾಡಿಸುತ್ತಾರೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವ ವ್ಯವಧಾನವಾಗಲಿ,ಸಹನೆಯಾಗಲಿ ವಧು ವರರಿಗೆ ಮತ್ತು ಅವರ ಪರಿವಾರದವರಿಗೇ ಇಲ್ಲದಿರುವುದು ತೀರ ದೊಡ್ಡ ದುರಂತ.

ನಮ್ಮ ಬಂಧು ಮಿತ್ರರರನ್ನು ಆಹ್ವಾನಿಸಿ ನಮ್ಮ ಸಂತೋಷವನ್ನು ಹಂಚಿಕೊಳ್ಳುವುದು ಆಚರಣೆಯೇ ಹೊರತು ಸಂಪ್ರದಾಯವೇನಲ್ಲ !!!ಮದುವೆಯಲ್ಲಿ ಮಾಂಗಲ್ಯ ಧಾರಣೆ ಮತ್ತು ಆಶೀರ್ವಾದಗಳು ಮುಖ್ಯವೇ ಹೊರತು ಚಿರೋಟಿ ಊಟವಲ್ಲ, ಕೊಡುವ ಉಡುಗೊರೆಗಳಲ್ಲ !!! ದೇವತೆಗಳು ಸೂಕ್ಷ್ಮ ರೂಪದಲ್ಲಿ ಆಗಮಿಸಿ ಮಾಡುವ ಆಶೀರ್ವಾದವು ಎಷ್ಟು ಮುಖ್ಯವೋ,ಉಪಸ್ಥಿತರಿರುವ ಎಲ್ಲಾ ಬಾಂಧವರು ಒಳ್ಳೇ ಮನಸ್ಸಿನಿಂದ ಆಶೀರ್ವಾದ ಮಾಡುವುದು ಅಷ್ಟೇ ಮುಖ್ಯ. ಮೇಲಿನ ತರಹದ ಜನರ ಆಶೀರ್ವಾದದ ತರಹ ಅಲ್ಲ !!!ಆದ್ದರಿಂದ ವಿವಾಹಕ್ಕೆ ಆಹ್ವಾನಿಸಲ್ಪಟ್ಟವರು ಮದುವೆಯ ಮಹತ್ವವನ್ನು ತಿಳಿದವರಾಗಿರಬೇಕು. ಮನಸೋ ಇಚ್ಛೆ ದಂಪತಿಗಳ ಸುಖದಾಂಪತ್ಯವನ್ನು ಹಾರೈಸಬೇಕು.ಸಾವಿರಾರು ಆಹ್ವಾನ ಪತ್ರಿಕೆಯನ್ನು ಮಾಡಿಸಿದ್ದರ ಸಮರ್ಥ ಉಪಯೋಗವಾಗಬೇಕು. ಇಲ್ಲದಿದ್ದರೆ ಅದು ನಿಜವಾಗಿಯೂ ದುಂದುವೇಚ್ಛವಲ್ಲವೇ ?

ಇನ್ನು ಮದುವೆಗಳ ಅದ್ದೂರಿತನದ ಬಗ್ಗೆ ಎರಡು ಮಾತು:

ನಾಲ್ಕು ನಾಲ್ಕು ಸ್ವೀಟುಗಳು, ಐದಾರು ಬಜ್ಜಿಗಳು, ತರಹ ತರಹದ ದೇಶಿ-ವಿದೇಶಿ ತಿನಿಸುಗಳನ್ನು ಎಲೆಯ ಮೇಲೆ ಹಾಕಿ, ಜನ ಅದನ್ನು ತಿನ್ನಲಿಕ್ಕೂ ಬಿಡದಷ್ಟು ಬೇಗ ಬೇಗ ಬಡಿಸಿ,ಎಂಜಲು ಕೈಯಲ್ಲೇ ತಾಂಬೂಲ ತೆಗೆದುಕೊಂಡು ಹೋಗುವ ಹಾಗೆ ಮಾಡುವ ಅದ್ದೂರಿ ಮದುವೆಗಳಿಗೆ ನನ್ನ ತಿರಸ್ಕಾರವಿದೆ. ಬಂದವರಿಗೆಲ್ಲಾ ಕಾಸಿಗಿಂತ ಸ್ವಲ್ಪ ದೊಡ್ದ ತಟ್ಟೆ,ಚಟಾಕಿಗಿಂತ ಸ್ವಲ್ಪ ಚಿಕ್ಕ ಲೋಟಗಳನ್ನು ಕೊಟ್ಟು ನಾವು ನಿಮಗೆ "return gift " ಕೊಟ್ಟೆವು ಎಂದು ಸಮಾಧಾನ ಪಟ್ಟುಕೊಳ್ಳುವ ಆಚರಣೆಯನ್ನು ನಾನು ಸಮ್ಮತಿಸುವುದಿಲ್ಲ.ನಮಗೆ ಒಳ್ಳೆಯ ಆತಿಥ್ಯ ಮುಖ್ಯ. ಅವರೂ ನಮ್ಮವರು ಅನ್ನುವ ಭಾವನೆ ಮುಖ್ಯ. ತಟ್ಟೆ ಲೋಟಗಳಲ್ಲ !!!

ಆರತಕ್ಷತೆಯ ವೇಳೆ ಆರ್ಕೇಸ್ತ್ರಾಗಳನ್ನು ಇಡಿಸಿ "ಅಶ್ವಮೇಧ...ಅಶ್ವಮೇಧಾ...." ಮತ್ತು " ಈ ದೇಹದಿಂದ ದೂರವಾದೆ ಏಕೆ ಆತ್ಮನೇ " ಅಂತಹ ಸಂದರ್ಭಕ್ಕೆ ವಿರುದ್ಧದ ಹಾಡನ್ನು ಹಾಡಿಸುವ ಆಯೋಜಕರಿಗೆ ನನ್ನ ತಿರಸ್ಕಾರಯುತ ಧಿಕ್ಕಾರವಿದೆ.

ನನ್ನ ಪ್ರಕಾರ ಸಾರ್ಥಕವಾದ ಮದುವೆ ಅಂದರೆ ಇದು :

ಕನ್ಯಾದಾನ ಮನೆಯಲ್ಲೇ ನಡೆದರೆ ಅದು ಅತ್ಯಂತ ಶ್ರೇಷ್ಠ.ಅನುಷ್ಟಾನ ಮಾಡುವ ಬ್ರಾಹ್ಮಣರು, ನಮ್ಮ ಅತ್ಯಂತ ನಿಕಟ ಸಂಬಂಧಿಕರು, ಪ್ರಾಣ ಸ್ನೇಹಿತರು ನಿಜವಾದ ಹಿತಚಿಂತಕರನ್ನಷ್ಟೇ ಆಹ್ವಾನಿಸಿದರೆ ಮನೆಯಲ್ಲೇ ಮದುವೆ ಮಾಡಬಹುದು.ಇದಕ್ಕೆ ವರನ ಕಡೆಯವರದೂ ಅನುಮೋದನೆ ಇದ್ದರೆ ಒಬ್ಬಟ್ಟಿಗೆ ತುಪ್ಪ ಹಾಕಿದಂತೆ. ಇಲ್ಲದಿದ್ದರೆ, ನಮ್ಮ ಸಂಪ್ರದಾಯದ ಮಠಗಳಲ್ಲೋ, ದೇವರ ಸನ್ನಿಧಿಯಲ್ಲೋ ಮದುವೆಯಾದರೆ, ಆಗ ಅವರೆಲ್ಲರ ಆಶೀರ್ವಾದ ಮತ್ತಷ್ಟು ಘನವಾಗಿರುತ್ತದೆ.ಅವರ ಹಾರೈಕೆ ಖಂಡಿತಾ ಫಲಿಸುತ್ತವೆ. ಇನ್ನು ಆರತಕ್ಷತೆಗೆಂದು ಒಂದು ದಿನದ ಮಟ್ಟಿಗೆ ಛತ್ರವೊಂದನ್ನು ಮಾಡಿದರೆ,ಬೆಳಗ್ಗಿಂದ ಸಾಯಂಕಾಲದ ವರೆಗೂ ವಧು ವರರೂ ಮತ್ತು ಆಹ್ವಾನಿತ ಮಿತ್ರರೂ ಮನಃಪೂರ್ವಕವಾಗಿ ಮಾತಾಡಿ, ಸಂತೋಷಿಸಿ ,ಔತಣದ ಸವಿಯನ್ನು ಸವಿಯಬಹುದು. ಇಲ್ಲದಿದ್ದರೆ, ಕಾದು ಕಾದು ಸುಸ್ತಾಗಿ, ಬಲವಂತದ ನಗೆ ಬೀರಿ ,ಒಂದು ಕ್ಷಣವಷ್ಟೇ ಮಾತಾಡಿ,ಭಾರಿ ವೀಡಿಯೋಗಳ ತುಣುಕುಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಏನಿದೆ ? ಈಗಿನ ಮದುವೆಯ ವೆಚ್ಚವೇ ಹತ್ತು ಲಕ್ಷದ ವರೆಗೂ ಬರುತ್ತದೆ.ಇಂತಹಾ ಸುಲಭದ ಉಪಾಯದಿಂದ ನಾವೆಷ್ಟು ದುಡ್ದನ್ನು ಉಳಿಸಬಹುದು ?ಅದನ್ನು ನಮ್ಮ ಇತರ ಕೆಲಸಗಳಿಗೆ ಬಳಸಿಕೊಳ್ಳಬಹುದಲ್ಲವೇ ?

ಸುಲಭವಾದ ಸಂಪ್ರದಾಯಕ್ಕಿಂತ ಕ್ಲಿಷ್ಟ ಮತ್ತು ಅನಗತ್ಯ ಆಚರಣೆಗಳಿಗೇ ನಾವು ಹೆಚ್ಚು ಒತ್ತು ಕೊಡುತ್ತೀವಲ್ಲಾ....ನಾವೇಕೆ ಹೀಗೆ ?

20 comments:

Anonymous said...

Luck, nange nin frens manevr mele thumbha kopa bartidhe :x

Srikanth - ಶ್ರೀಕಾಂತ said...

ಲೇಖನ ಸೊಗಸಾಗಿದೆ.

ಮದುವೆ ಅನ್ನೋದು ಇಂದಿನ ಜಗತ್ತಲ್ಲಿ definition ಇಂದ implementation ವರ್ಗು review ಮಾಡ್ಬೇಕಾದ ವಿಚಾರ. ಯೋಚಿಸುತ್ತಾ ಕುಳಿತರೆ ಇನ್ನೂ ಬೇಕಾದಷ್ಟು ಅವ್ಯವಸ್ಥೆಗಳು ಮನಸ್ಸಿಗೆ ಬರುತ್ತದೆ. ಆದರೆ ನನಗೆ ಸಧ್ಯಕ್ಕೆ ಮದುವೆಯ ಯೋಚನೆ ಬೇಡ :-)

ಹಸೆಮಣೆಯೇರುವವರು, ಏರಿಸುವವರು ತಾವೇನು ಮಾಡಹೊರಟಿದ್ದಾರೆ, ಅದರರ್ಥವೇನು ಎಂದು ಮುಂಚಿತವಾಗಿ ಯೋಚಿಸಿದರೆ ಒಳಿತು.

Sridhar Raju said...

nim prakaara madve hegirbeku antha bardiddeeralla adhu chennagidhe, super -u....artha poorNavaadha lekhana... :-)

Parisarapremi said...

ಶ್ರೀಧರನದು ಡಿಟೋ!

ನಿನ್ನ ಮದುವೆಗೂ ಬರ್ತೀನಲ್ಲಾ, ನೋಡೋಣ, ಹೇಗಿರುತ್ತೆ ಅಂತ. ;-)

ಸುಮ್ನೆ ತಮಾಷೆಗೆ ಹೇಳ್ದೆ. ನೀನು ಹೇಗೆ ಬಯಸುತ್ತಿದ್ದೀಯೋ ಹಾಗಾಗಾಲಿ. ದುಂದುವೆಚ್ಚಕ್ಕೆ ಗುರಿಯಾಗದೆ, ಡಂಭಾಚಾರಗಳಿಗೊಳಪಡದೆ, ಒಂದು ಸುಂದರ ಸುಖ ಬದುಕನ್ನು ನಿರ್ಮಿಸಲು ಬುನಾದಿಯಂತಿರಲಿ ಎಂದು ಹರಸುತ್ತೇನೆ.

ಉದಾಹರಣೆಗೆ ಕೊಟ್ಟ ಕೆಲ ಪ್ರಸಂಗಗಳು ಬಹಳ ವಿನೋದಮಯವಾಗಿದ್ದರೂ ವಿಪರ್ಯಾಸವನ್ನು ವ್ಯಂಗ್ಯವಾಗಿ ಚೆನ್ನಾಗಿ ಚಿತ್ರಿಸಿದ್ದೀಯ. ಈ ಯುಗದಲ್ಲಿ ಆಡಂಬರಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದೀಯ. ಒಟ್ಟಿನಲ್ಲಿ ಲೇಖನ ಬಹಳ ಚೆನ್ನಾಗಿದೆ. ಇಂಥದ್ದೇ ವೈಚಾರಿಕ ಲೇಖನಗಳು ಮುಂಬರಲಿ!

Sridhar Raju said...

arun: eno adhu ಶ್ರೀಧರನದು ಡಿಟೋ!
andre?? Wat it is??

Lakshmi Shashidhar Chaitanya said...

ಶ್ರೀಧರ್, I will explain.

PP ಹೇಳಿದ್ದು ಏನು ಅಂದ್ರೆ... ನಿಮ್ಮ comment nalli ಇರುವ ಭಾವನೆಯೇ ಅವರಿಗೂ ಇದ್ದು, ಅದನ್ನು ಮತ್ತೆ ಬರೆಯಲು ಇಚ್ಛಿಸದೇ (may be lazy too )ditto ಅಂದಿದ್ದಾರೆ. dont worry ಮಾಡ್ಕೊಳ್ಳೀ...ನಿಮ್ಮ comment ಅನ್ನು copy ಹೊಡೆದಿಲ್ಲ !! and... ನೀವು ನಾನಾರ್ಥ, ವಿಶೇಷಾರ್ಥ ಹುಡುಕಿ ಅಪಾರವಾದ ಅರ್ಥಗಳುಳ್ಳ ಅಪಾರ್ಥ ಮಾಡಿಕೊಳ್ಳಬೇಡಿ !! ;-)

Unknown said...

Lakshmi ee madhuve vimarshe chennagi idhe

ವಿ.ರಾ.ಹೆ. said...

ಲಕ್ಷಿಯವರೇ ನಮಸ್ಕಾರ.

ಹೀಗೆ ಬ್ರೌಸ್ ಮಾಡುತ್ತಾ ಮಾಡುತ್ತಾ ನಿಮ್ಮ ಬ್ಲಾಗ್ ತಲುಪಿದೆ. ಬಹಳ ಚೆನ್ನಾಗಿ ಬರೆದಿದ್ದೀರ. ನನ್ನದೇ ಮನಸ್ಸಿನ ಭಾವನೆಗಳು, ಪ್ರಶ್ನೆಗಳು ಎಲ್ಲವೂ ಇಲ್ಲಿ ಬರಹ ರೂಪಕ್ಕಿಳಿದಂತಿವೆ. ನನ್ನ ಹಾಗೆಯೇ ಯೋಚಿಸುವವರೂ ಇದ್ದಾರಲ್ಲ ಎಂದು ಬಹಳ ಖುಷಿಯಾಯಿತು. ಧನ್ಯವಾದ

Lakshmi Shashidhar Chaitanya said...

[ವಿಕಾಸ್ ಹೆಗಡೆ]

ಧನ್ಯವಾದಗಳು.

ಅಂತರ್ವಾಣಿ said...

ಲಕ್ಷ್ಮಿ,
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
ಇದು ಅನೇಕ ಮದುವೆಗಳಲ್ಲಿ ನಡೆಯೋ ಸಾಮಾನ್ಯ ದೃಶ್ಯ.
ಈ ದುಂದು ವೆಚ್ಚ ಮಾಡುವುದನ್ನು ಜನರು ನಿಲ್ಲಿಸಬೇಕು. ಆಗ ಯೋಚಿಸಿದ ನಿಮ್ಮ ಮನಸ್ಸಿಗೆ, type ಮಾಡಿದ ಬೆರಳುಗಳಿಗೆ.. ಸಾರ್ಥಕ. :)

ತೇಜಸ್ವಿನಿ ಹೆಗಡೆ said...

ನಿಜಕ್ಕೂ ನಿಮ್ಮ ಲೇಖನ ಸಮಾಜದ ಕಣ್ತೆರೆಸುವಂತಿದೆ. ನಾವೇಕೆ ಹೀಗೆ? ಎಂದು ಒಮ್ಮೆ ನಮ್ಮನ್ನು ನಾವೇ ಪ್ರೆಶ್ನಿಸ ಬೇಕಾಗಿದೆ.

Shrilatha Puthi said...

ತುಂಬಾ ಚೆನ್ನಾಗಿದೆ ಲಕ್ಷ್ಮಿ ಬ್ಲಾಗ್! ಇವತ್ತೇ ನಿಮ್ಮ ಬ್ಲಾಗ್ ನೋಡಿದ್ದು, ಎಲ್ಲಾ ಬರಹಗಳನ್ನು ಓದಿಸಿಕೊಂಡು ಹೋಯ್ತು.

ARUN MANIPAL said...

ಬರಹ ಚೆನ್ನಾಗಿದೆ....:-)

Bhargava said...

Lekhana thumba chennagide. Adambarada maduveya arthaheenatheyannu chennagi chitrisiddiri. Ella OK. Aadre ee aacharagalella yaake?

Srinivasa Rajan (Aniruddha Bhattaraka) said...

hmmm.. tumba chennagide lekhana... ishtella noDid mele maduve/munji/any shubha samaarambhagaLalli heLo moTTa modalane vaakya manassige bantu...
"namaH sadasE...." anta..
idanna Odid mele aa "sadas"-ige naavu namaskara maaDbeka? annodu prashne aage uLiyutte... alva?

ನಾವಡ said...

ನಿಮ್ಮ ಬ್ಲಾಗ್ ಗೆ ಹಿಂದೊಮ್ಮೆ ಬಂದು ಶ್ರಾದ್ಡದ ಲೇಖನ ಓದಿದ್ದೆ. ಈಗ ಸುಮ್ಮನೆ ಬೇರೆ ಬ್ಲಾಗ್ ಗೆ ಬಂದು ನಿಮ್ಮ ಮದುವೆ ಲೇಖನ ಓದಿದೆ. ಚೆನ್ನಾಗಿದೆ. ಹೊಸ ಸಂದರ್ಭದಲ್ಲಿ ಎಲ್ಲವೂ ಅರ್ಥ ಪಡೆದುಕೊಳ್ಳಬೇಕು ಎಂದೆನಿಸುವಾಗ ಇಂಥ ಪ್ರಶ್ನೆಗಳು ಏಳುವುದು ಸಹಜ.
ಆದರೆ ಇಂದು ಪ್ರತಿಷ್ಥೆಯೇ ಮೌಲ್ಯವಾಗುತ್ತಿರುವಾಗ ಏನು ಹೇಳುವುದು ?
ನಾವಡ

Smadurk Infotech said...

Nieevu bareva reethi tumba tumba muddaagide..padagala jodane adbhutavaagide…

Nanna putaani blog

www.navilagari.wordpress.com

idakke nimma blaag rolnalli swalpa jaaga kodi:)

Nimma somu

ಪೂರ್ಣ ವಿ-ರಾಮ said...

ವೆರ್ರಿ ಗುಡ್ ಸ್ಟೋರಿ.


ಆದರೆ ಎಲ್ಲೋ !!! ಗಳು ತುಂಬಾ ರಿಪೀಟ್ ಆದವಾ ಎಂಬ ಸಣ್ಣ ಡೌಟು ಕಾಡುತಿದೆ. ಆದರೂ ಅದು ನಿಮ್ಮ ಬರಹದ ಥೀಮಿಗೆ ಅನಿವಾರ್ಯವೂ ಹೌದು. ಆದರೆ ಟೋಟ್ಟಲಿ ಇಟ್ ಈಸ್ ಗುಡ್.. \\

ಅದಕ್ಕೇ ಹೇಳೋದು ಮಧುವೆಯ ಈ ಬಂಧ, ಅನುರಾಗದ ಅನುಬಂಧ ಏಳೇಳು.........




ಥ್ಯಾಂಕ್ಯೂ ಮೇಮ್....

ಪೂರ್ಣ ವಿ-ರಾಮ said...

ಓದಿದೆ. ಸಂಪೂರ್ಣ ಓದಿದೆ. ತುಂಬಾ ಚೆನ್ನಾಗಿತ್ತು. ಆದರೆ ಎಲ್ಲೋ ಒಂದಿಷ್ಟು ಕಡೆ !!! ಗಳು ಹೆಚ್ಚಾಯಿತೇನೋ ಎಂಬ ಸಣ್ಣ ಡೌಟು ಇದೆ. ಆದರೂ ನಿಮ್ಮ ಬರಹ ತೀವೃತೆಗೆ ಅದು ಅನಿವಾರ್ಯವಿತ್ತೇನೋ ಬಿಡಿ.
ಬಟ್ ವೆರ್ರಿ ನೈಸ್ ಸ್ಟೋರಿ ಮೇಮ್


ಕೊನೆಯ ಸಾಲು

ಮದುವೆಯ ಈ ಬಂಧ ಅನುರಾಗದ ಅನುಬಂಧ....


ಥ್ಯಾಂಕ್ಯೂ ಮೇಮ್..

Ganesh K said...

ನಿಮ್ಮ ಲೇಖನ ವಾಸ್ತವಕ್ಕೆ ಪ್ರಸ್ತುತವಾಗಿದೆ. ದುಂದು ವೆಚ್ಚ, ಆಡಬರ, 'ಬಂಗಾರ ಪ್ರದರ್ಶನ ಮೇಳ', ಅದ್ಧೂರಿತನ ಎಲ್ಲವುಗಳು ಜೀವನ ಪಾದಾರ್ಪಣೆಗೆ ಅಗತ್ಯವಾದವುಗಳಲ್ಲ ಎಂಬುದನ್ನ ಬಿಂಬಿಸಿದ್ದೀರಿ. ಇದಕ್ಕೆ ನನ್ನ ಸಹಮತ, ಅಭಿಮತ ಇದೆ. ಆದರೆ, ಶಾಸ್ತ್ರಗಳಿಗೆ ಎಲ್ಲವುಗಳಿಗೂ ಅರ್ಥಗಳಿವೆ ಅನ್ನೋದು ಯಾಕೋ ಸರಿಬರುವುದಿಲ್ಲ. ಶಾಸ್ತ್ರಗಳೂ ಕೂಡಾ ನಾವೂ ನೀವೂ ಇರುವಂತೆ ಹಿಂದೆ ಇದ್ದ ಬರಹಗಾರರು ಬರೆದ ಬರಹಗಳು ಅಷ್ಟೇ. ಅವರು ಹೇಳಿದ್ದು ಎಲ್ಲವೂ ಸರಿ ಎಂದು ಒಪ್ಪಿಕೊಂಡರೆ, ಸಮರ್ಥಿಸಿಕೊಂಡರೆ ನಮ್ಮ ವಿವೇಚನೆಗೆ ಕೆಲಸ ಕೊಡುವ ಅಗತ್ಯವೇ ಇಲ್ಲ. ಇನ್ನು ಶಾಸ್ತ್ರಗಳ ಅರ್ಥಗಳನ್ನ ಒಂದೊಂದಾಗಿ ಹೇಳಿ ಮದುವೆ ಮಾಡಿಸಿದರೆ ಹಿತ ಎಂದಿದ್ದೀರಿ. ಎಷ್ಟೋ ಜನ ಪುರೋಹಿತರಿಗೆ ಅರ್ಥಗಳೇ ಗೊತ್ತಿಲ್ಲ. ಗೊತ್ತಿದ್ದರೂ, ಅವನ್ನ ವಿವರಿಸುತ್ತಾ, ಅದನ್ನ ಸಮರ್ಥಿಸುವ ಕೆಲಸವೇ. 'ಯಾಕೆ' ಅನ್ನೋ ಪ್ರಶ್ನೆಗೆ ಉತ್ತರವಿಲ್ಲದ ಪ್ರಶ್ನೆಗಳು ಮಿಥ್ಯತೆಯ ಕಡೆಗೇ ವಾಲುತ್ತವೆ. 'ಮುಹೂರ್ತ' ಫಿಕ್ಸ್ ಮಾಡೋದೂ ಇದರಲ್ಲಿ ಸೇರುತ್ತದೆ. ಅದೇ ಸಮಯ ಯಾಕೆ ಅನ್ನೋ ಪ್ರಶ್ನೆ ನಮ್ಮಲ್ಲಿ ಬರುವುದೇ ಇಲ್ಲ. ಏನೋ ನಮ್ಮ ಹಿರಿಯರು ಮಾಡಿದ್ದಾರೆ, ಅದನ್ನ ಪಾಲಿಸಿಕೊಂಡು ಹೋಗುವುದರಲ್ಲೇ ನಮ್ಮ ಧನ್ಯತೆ ಇದೆ ಎಂದು ಪರಿಭಾವಿಸುವುದರಲ್ಲಿ ನಿರರ್ಥಕತೆ ಅಡಗಿದೆ ಎನ್ನುತ್ತೇನೆ.