Saturday, October 10, 2009

ಕಾಲದ ಬಂಡಿಯಲ್ಲಿ ನಾವು ಎಷ್ಟು ಮುಂದೆ ಸಾಗಿದ್ದೇವೆ ?

ಪ್ರಪಂಚದಲ್ಲಿ ನಾಗರಿಕತೆ ಆರಂಭವಾಗಿದ್ದು ಸಾವಿರಾರು ವರ್ಷಗಳ ಹಿಂದೆ.ಪ್ರಾಣಿಗಳಿಗಿಂತ ನಾವು ವಿಕಾಸಪಥದಲ್ಲಿ ಮುಂದೆ ಸಾಗತೊಡಗಿದ್ದೆವು. ಕಾಲಚಕ್ರದ ವೇಗದ ಗತಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳತೊಡಗಿದೆವು.ಪ್ರಾಣಿಗಳಿಗಿಂತ ಚೆನ್ನಾಗಿ ಯೋಚಿಸಿ ಅವನ್ನು ವ್ಯಕ್ತಪಡಿಸಬಲ್ಲ, ಕಾರ್ಯಗತಗೊಳಿಸಬಲ್ಲ ನಮ್ಮ ಸಾಮರ್ಥ್ಯ ನಾಗರಿಕತೆಗಳಿಗೆ ನಾಂದಿ ಹಾಡಿತು. ನಾಗರಿಕತೆಯಿಂದ ಸಮಾಜ ಬೆಳೆಯಿತು,ಸಮಾಜದಲ್ಲಿ ರೀತಿ, ನೀತಿ, ಆಚಾರ, ವಿಚಾರ, ಸಂಪ್ರದಾಯ ಸಂಸ್ಕೃತಿಗಳು ಮೇಳೈಸತೊಡಗಿದವು. ಕಾನೂನು, ದಂಡ ಸಂಹಿತೆ, ನೀತಿ ಸಂಹಿತೆ, ಧರ್ಮಶಾಸ್ತ್ರಗಳ ಪುಸ್ತಕಗಳೂ ಸಹ ಬರೆಯಲ್ಪಟ್ಟು, ಅದರಂತೆ ಜನ ನಡೆದುಕೊಳ್ಳುತ್ತಲೂ ಇದ್ದರು...ದಂಗೆಗಳು ಏಳುವವರೆಗೂ.ದಂಗೆ ಚಾರಿತ್ರಿಕವಾಗಿ ಎಷ್ಟು ಮಹತ್ವದ್ದೋ ಅಷ್ಟೇ ನಮ್ಮ ಮಾನಸಿಕ ವಿಕಾಸಪಥದಲ್ಲಿಯೂ ಒಂದು ಬಹುದೊಡ್ಡ ಘಟ್ಟ. ಮನಸ್ಸು, ಬುದ್ಧಿ ಎರಡನ್ನೂ ಉಪಯೋಗಿಸಿ ಇಂಥದ್ದು ಸರಿ ಇಲ್ಲ, ನಮಗೆ ಇದರ ಅವಶ್ಯಕತೆ ಇದೆ,ಇದು ಬೇಕು, ಇದು ಬೇಡ, ಇಂಥದ್ದಕ್ಕೆಲ್ಲಾ ಜನತೆ ಗಮನ ಹರಿಸತೊಡಗಿತು. ವಿಜ್ಞಾನ ತಂತ್ರಜ್ಞಾನಗಳಲ್ಲಿಯೂ ಪ್ರಗತಿಗಳಾದವು. ಸರಿ ತಪ್ಪುಗಳ ಪುನರ್ವಿಮರ್ಶೆ, ಪುನರ್ವಿಂಗಡನೆಗಳಾದವು. ಕಾಲದ ಗಾಲಿಯಲ್ಲಿ ಸಿಲುಕಿ ಈಗ ಭಾವನೆಗಳು ಮತ್ತು ಬಹುಕಾಲ ಸತ್ಯವಾಗಿದ್ದ ಕೆಲ ನಂಬಿಕೆಗಳು ಪುನರ್ವಿಮರ್ಶಾಯೋಗ್ಯವಾಗಿದೆ.

ಭಾವನೆಗಳಲ್ಲಿ ಕೋಟ್ಯಂತರ ವಿಧಗಳಿವೆ. ನಾವು ಗೆಳೆತನದ ಬಗ್ಗೆ ಗಮನ ಹರಿಸೋಣ. ಗೆಳೆತನ ಹುಡುಗರಲ್ಲಿ, ಹುಡುಗಿಯರಲ್ಲಿ ಗುಂಪಾಗಿ ಸಾಮಾನ್ಯ. ಹುಡುಗ ಮತ್ತು ಹುಡುಗಿಯ ನಡುವೆ ಕೇವಲ ಗೆಳೆತನ ಅಪರೂಪದ ಸಂಗತಿ. Confucius ಎಂಬ ಸಂತ ಪುಣ್ಯಾತ್ಮ "There can be no other emotional relationship between a man and a woman other than love" ಎಂದು ಅಪ್ಪಣೆ ಕೊಡಿಸಿದುದರ ಪರಿಣಾಮ ಹುಡುಗ ಹುಡುಗಿಯರು ಜೊತೆಯಾದರೆಂದರೆ ಬಾಳೆ ಎಲೆ ಊಟಕ್ಕೆ ದಿನ ಎಣಿಸಬಹುದೆನ್ನುವುದು ಲೋಕರೂಢಿಯಾಯ್ತು. ಇಂದೂ ಹಾಗೆಯೇ ಇದೆ.ಈ ನಂಬಿಕೆಯನ್ನು ಬುಡಸಮೇತ ಯಾರೂ ಕಿತ್ತೂ ಹಾಕಲಿಲ್ಲ, ನೈಜ ಗೆಳೆತನ ಹೆಚ್ಚು ಕಾಲ ಉಳಿಯಲೂ ಇಲ್ಲ. ಯಾಕೋ, ಯಾರೂ ದಂಗೆಯೂ ಏಳಲಿಲ್ಲ. Confucious ದಯೆ, ಬಾಲಿವುಡ್ಡು ಇಂದು ಈ ರೀತಿ ಇದೆ. ಅಂತೆಯೇ ಬಹುತೇಕ ಜನರ ಕಲ್ಪನೆ, ಭಾವನೆ, ನಂಬಿಕೆಗಳೂ !

ಹಿಂದೆಲ್ಲಾ ಅಕ್ಕಪಕ್ಕದಮನೆಯವರು ಒಟ್ಟಿಗೆ ಸೇರಿ ಆಟ ಆಡುತ್ತಿದ್ದರು. ನಾನೂ ಆಡಿದ್ದೆ. ನಾವು ಹುಡುಗಿಯರು ಇನ್ನೂ ಸಿಕ್ಕಾಗ ಮಾತಾಡುತ್ತೇವೆ. ಹುಡುಗರನ್ನೆಲ್ಲ ಮಾತಾಡಿಸುವುದು ಕಷ್ಟ. ಕನ್ಫ್ಯೂಷಿಯಸ್ ಕೃಪೆ !

ಕಾಲದ ಗಾಲಿ ಮುಂದೆ ಓಡಿದೆ. ಈಗ ಮಕ್ಕಳೆಲ್ಲಾ ಮನೆಯಲ್ಲಿ ಪ್ಲೇ ಸ್ಟೇಷನ್ ಆಡುವುದರಲ್ಲಿ ನಿರತರಾಗಿರುತ್ತಾರೆ ಆದ್ದರಿಂದ ಅವರಿಗೆ ಅಕ್ಕಪಕ್ಕದ ಮನೆಯವರ ಅವರ ವಾರಿಗೆಯ ಹುಡುಗರ ಅರಿವಿಲ್ಲ. ಹುಡುಗಿಯರ ಮೇಲೆ ಕಣ್ಣಿಟ್ಟಿರುತ್ತಾರೆ ಅನ್ನೋ ಭಯಕ್ಕೆ ತಂದೆ ತಾಯಿಗಳೂ ಈಗಿನಿಂದಲೇ ಎಚ್ಚರ ವಹಿಸುತ್ತಾರಾದ್ದರಿಂದ ಅವರಿಗೆ ಪ್ಲೇ ಸ್ಟೇಷನ್ನಿನ ಹುಡುಗಿಯರೇ ಗತಿ. ಸ್ಕೂಲುಗಳಲ್ಲೇ ಲವ್ ಸ್ಟೋರಿಗಳು ಬೆಳೆಯುವುದು ಬಾಲಿವುಡ್ಡಿನ ದೊಡ್ಡ ಸಾಮಾಜಿಕ ಕೊಡುಗೆ. ಪೀಳಿಗೆಗಳು ಮುಂದೆ ಸಾಗಿವೆ, ಈ ಭಾವನೆ, ಕಲ್ಪನೆಗಳೂ ಬಲಿತಿವೆ.

ಮನೆಯ ಮುಂದಿನ ಹರಟೆ ಕಟ್ಟೆಗಳು ಈಗ social networking sites ಗಳಾಗಿ ರೂಪಾಂತರಗೊಂಡು ಬ್ಲಾಗ್ ಎಂಬ ಹೊಸ ವೇದಿಕೆಯೊಂದು ಹರಟೆಗೆ ಸೃಷ್ಟಿಯಾಗಿದೆ. ನೈಜ ಪ್ರಪಂಚದಲ್ಲಿ ಮಾಡಲು ಸಾಧ್ಯವಿಲ್ಲದಿರುವ ಕೆಲವು ಅದ್ಭುತ (?) ಕೆಲಸಗಳನ್ನು ಆರ್ಕುಟ್, ಫೇಸ್ ಬುಕ್ನಲ್ಲಿ ಮಾಡಬಹುದಾಗಿದೆ. ಅದೇನೆಂದರೆ, ನಾವು "ನಾವು" ಎಂದು ಹೇಳಿಕೊಳ್ಳದೇ ಇನ್ಯಾರ ತರಹವೋ ಬಿಂಬಿಸಿಕೊಳ್ಳುವುದು. ಕನ್ನಡಿಯ ಮೇಲಿನ ಬಿಂಬ ನೈಜ ಬಿಂಬವಲ್ಲ ಹೇಗೋ, ಈ ಪ್ರೊಫೈಲುಗಳೂ ಬಹುಪಾಲು ನೈಜವಲ್ಲ. ಮನಸ್ಸು ಮಾಯಾಪೀಡಿತವಾಗಿರುವುದರಿಂದ ನಾವು ನಮಗೆ ಗೊತ್ತಿರುವ ಪ್ರೊಫೈಲಿನ ಜನರನ್ನು ( ಪ್ರಾಣಿಗಳು ಇನ್ನೂ ತಮ್ಮ ಪ್ರೊಫೈಲುಗಳನ್ನು ಮಾಡಿಕೊಂಡಿರುವ ಬಗ್ಗೆ ವರದಿ ಬಂದಿಲ್ಲ ಆದ್ದರಿಂದ ಜನ ಎಂದು ಧೈರ್ಯವಾಗಿ ಹೇಳುತ್ತೇನೆ !) ನಮ್ಮವರೆಂದೇ ನಂಬಿ, ಗೆಳೆತನ ಮಾಡಿ ಕೆಟ್ಟಿದ್ದೇವೆಯೇ ಹೊರತು ಮೋಸಗಳು ಬಯಲಾದಾಗ ಅದರ ವಿರುದ್ಧ ದಂಗೆ ಎದ್ದವರು ಕೋಟಿಗೊಬ್ಬರು. ನಂಬಿಕೆಗಳ, ಭಾವನೆಗಳ, ಸಂಬಂಧಗಳ ವ್ಯಾಖ್ಯಾನಗಳೇ ತಲೆಕೆಳಗಾದಾಗ ನಮಗಾದ ಆಘಾತವನ್ನು ಅರಿಯದೇ " ಎಲ್ಲಾ ಮಾಯೆ ! " ಅಂತ ವೇದಾಂತವನ್ನು, "virtual world ನಲ್ಲಿ ಇದೆಲ್ಲಾ ಕಾಮನ್ನು, ಸುಮ್ನೆ ತಲೆ ಕೆಡಿಸಿಕೊಳ್ತಾರೆ ಜನ ! they don’t know how to move on in life" ಅನ್ನೋ "practical" ಜನರು ತಮ್ಮ ತಮ್ಮ ಕ್ಲೀಷೆಯ ವಾದವನ್ನು ಮುಂದುವರೆಸಿದರೆ, ಹುಡುಗರೆಂದು ಮೋಸ ಹೋಗಿ ಕಡೆಗೆ ಅದೇನಾದರೂ ಹುಡುಗಿಯ ಪ್ರೊಫೈಲ್ ಆಗಿದ್ದರೆ ಹುಡುಗರು ಕನ್ ಫ್ಯೂಷಿಯಸ್ ಮಹಿಮೆಯಿಂದ confuse ಆಗುತ್ತಾರೆ. ಹುಡುಗಿಯ ಪ್ರೊಫೈಲೆಂದು ಮೊದಲು ಗೆಳೆತನ ಬೆಳೆಸಿದ್ದರೆ, ಅದು ಮುಂದೆ ಹೋಗಿರತ್ತೋ ಬಿಡತ್ತೋ, ಮೋಸವನ್ನು ಬಯಲಿಗೆಳೆಯುವ ವಿಷಯದಲ್ಲಿ ಅಡಕತ್ತರಿಯಲ್ಲಿ ಸಿಕ್ಕಿಬೀಳುತ್ತಾರೆ. ಪ್ರತಿಭಟನೆ ಮಾಡಲು ಬುದ್ಧಿ ಹೇಳತ್ತೆ , ಅವರ ಮೋಸ ಬಯಲಿಗೆಳೆಯಲು ಪುರಾವೆಯೂ ಇರತ್ತೆ, ಆದರೆ ಅದನ್ನು ತಪ್ಪೆಂದು ವಾದಿಸುವ ಜನರನ್ನು ಎದುರಿಸಲು ಬೇಕಾಗಿರುವ ಧೈರ್ಯದ ದಾಸ್ತಾನು ಮಾತ್ರ ಖಾಲಿಯಾಗಿರತ್ತೆ. ಇದು ಯಾರ ತಪ್ಪೂ ಅಲ್ಲ. ಧೈರ್ಯ ಖಾಲಿಯಾಗಲು ಕಾರಣ ಅದೇ ಕನ್ ಫ್ಯೂಷಿಯಸ್ ಮಹಿಮೆ. ಭಾವನೆಗಳ ಬಗ್ಗೆ ಕೇಳುವವರಿಲ್ಲ, ಅದು ಸ್ನೇಹದ್ದಾಗಿರಲಿ, ಪ್ರೀತಿಯದ್ದಾಗಿರಲಿ. ಆದ ಅನ್ಯಾಯದ ವಿರುದ್ಧ ದನಿ ಎತ್ತಿದವರೆಷ್ಟು ಜನ ?

ಇನ್ನು ಇನ್ನೊಂದು ವಿಧದ ಗೆಳೆತನಕ್ಕೆ ಬರೋಣ. ಹುಡುಗಿಯೆಂದು ಸಹಜ ಸಖ್ಯ ಬೆಳೆಸಿಕೊಂಡೂ ಅದೇನಾದರೂ ಹುಡುಗನ ಪ್ರೊಫೈಲ್ ಆಗಿದ್ದರೆ ಅದೂ ಸಹ ಆಘಾತಕಾರಿಯಾಗಿರುತ್ತದೆ.ಇಲ್ಲೂ confusion ಮತ್ತು Confucius ರಾರಾಜಿಸುತ್ತಾರೆ ಆದ್ದರಿಂದ ಪ್ರತಿಭಟನೆ ದೂರವಾಗಿಯೇ ಉಳಿಯುತ್ತದೆ. ಸ್ನೇಹದಲ್ಲಿ ಸತ್ಯಕ್ಕೆ ಬೆಲೆಕೊಡದವರ ಬಗ್ಗೆ ತಿರಸ್ಕಾರ ಹುಟ್ಟಿದರೆ, ಸಖ್ಯದಲ್ಲಿ ವಿನಿಮಯಗೊಂಡ ಕೆಲವು ವಿಷಯಗಳು ಎಲ್ಲಿ ಅಪಾಯಕಾರಿ ಕೈ ಸೇರಿಬಿಟ್ಟವೋ ಅನ್ನುವ ಹೆದರಿಕೆ ನಮ್ಮನ್ನು ಮುಕ್ಕಾಲು ಸಾಯಿಸಿಯೇಬಿಟ್ಟಿರುತ್ತವೆ !

ಕಾಲದ ಬಂಡಿ ಏರಿ ಕಟ್ಟೆ ಬಿಟ್ಟು ನಾವು ಕೀಬೋರ್ಡನ್ನು ಕುಟ್ಟುವಷ್ಟು ಮುಂದೆ ಸಾಗಿದರೂ ಸರಿ ತಪ್ಪನ್ನು ಖಂಡಿಸುವಷ್ಟು , ಮುಕ್ತವಾಗಿ ಪ್ರತಿಭಟನೆ ಮಾಡುವಷ್ಟು ಮುಂದೆ ಬಂದಿಲ್ಲ. ಯಾಕಂದರೆ, ವರ್ಷಾನುಗಟ್ಟಲೆಯ ಹಿಂದಿನ ಅಪ್ಪಣೆಯನ್ನೇ , "ಅಯ್ಯೋ ನಮಗೆ ಯಾಕೆ ಬೇಕು ಇವೆಲ್ಲ ? " ಅನ್ನುವ ಧೋರಣೆಯನ್ನೇ ನಾವು ಬಿಟ್ಟಿಲ್ಲವಲ್ಲ ! ಆರ್ಕುಟ್ ಮದುವೆಗಳ ಬಗ್ಗೆ ನನ್ನ ಅಸಮ್ಮತಿಯಾಗಲಿ, ಆಕ್ಷೇಪಣೆಯಾಗಲಿ ಖಂಡಿತಾ ಇಲ್ಲ. ಅದನ್ನು ಪ್ರಗತಿಯೆಂದೇ ಪರಿಗಣಿಸೋಣ. ಆದರೆ ಪ್ರತಿಯೊಂದು ಸಂಬಂಧಕ್ಕೂ ಸ್ನೇಹವೇ ಮೊದಲ ಮೆಟ್ಟಿಲಾಗಿರುವುದರಿಂದ ಸ್ನೇಹಿತರಾಗಲು ಈಗ ನಾವು ಹಲವಾರು ದೃಷ್ಟಿಕೋನಗಳಲ್ಲಿ ನೂರಾರು ಬಾರಿ ಯೋಚಿಸಬೇಕಾಗತ್ತೆ. ಸಭ್ಯತೆ ಕೂಡಾ ಮುಖ್ಯವಾತ್ತೆ. ನಾನು ನನ್ನ ಆರ್ಕುಟ್ ಪ್ರೊಫೈಲ್ ನಲ್ಲಿ " please do not send friend request if we do not know each other" ಅಂತ ಹಾಕಿದ್ದಕ್ಕೆ ನನ್ನೆಲ್ಲಾ ಮಿತ್ರರು ನಕ್ಕಿದ್ದರು. ಆದರೆ ನಾನು ಆರ್ಕುಟ್ ನಲ್ಲಿ ಹಲವಾರು ಬಾರಿ ನಡೆಯುವ ಮೋಸಗಳಿಂದ ನೊಂದು ಅತ್ತ ನನ್ನ ಸ್ನೇಹಿತೆಯರ ತರಹ ಅಳಲು ಸಿದ್ಧಳಿರಲಿಲ್ಲ. ಅಷ್ಟೇ.

ಬದಲಾವಣೆ ಜಗದ ನಿಯಮವಾದರೂ, "ಬದಲಾವಣೆ ಜಗದ ನಿಯಮ" ಅನ್ನುವ ನಿಯಮಕ್ಕೆ ಬದಲಾವಣೆಯಿಲ್ಲ ! ಇನ್ನೊಂದು ಬದಲಾಗದ ನಿಯಮ Confucius ನ ನಿಯಮ ಆಗುವುದನ್ನ ನಾವು ತಡೆಯಬೇಕಿದೆ. ಭಾವನೆಯ ಈ ಕಟ್ಟಲೆಯನ್ನು ನಾವು ಇಂದು ವಿಮರ್ಶೆಗೆ ಒಳಪಕಿಡಿಸಬೇಕಿದೆ. ಭಾವನೆಗೆ ಆದ ಪೆಟ್ಟನ್ನು ಸರಿಪಡಿಸಲು ನಾವು ಹೋರಾಡಲೇಬೇಕಿದೆ. ನಾಗಾಲೋಟದಲ್ಲಿ ಪ್ರಗತಿ ಹೊಂದುತ್ತಿರುವ ತಂತ್ರಜ್ಞಾನ ಕುಮತಿಗಳ, ಭಾವನಾಶೂನ್ಯರಾದ, ಕಾರ್ಯವಾಸಿ ಮಾನವರ ವಿಕಾಸಕ್ಕೆ ಎಡೆ ಮಾಡಿಕೊಡದಿರಲಿ ಎನ್ನುವುದಷ್ಟೇ ನನ್ನ ಆಶಯ. ಸ್ನೇಹಕ್ಕೆ ನಂಬಿಕೆಯ ಭದ್ರ ಅಡಿಪಾಯದೊಂದಿಗೆ ಸಭ್ಯತೆಯ ಚೌಕಟ್ಟಿನ ಅವಶ್ಯಕತೆಯಿದೆ.

ಅಕ್ಟೋಬರ್ ಹದಿನಾರು ೨೦೦೯ ರಂದು ನಾವೇಕೆ ಹೀಗೆ ಪ್ರಾರಂಭವಾಗಿ ಎರಡು ವರ್ಷ ಆಗಿದ್ದನ್ನು ಆಚರಣೆ ಮಾಡಬೇಕು ಅಂತ ನನಗೆ ಅನ್ನಿಸಲಿಲ್ಲ. ಈ ಬಾರಿ ನಾವೇಕೆ ಹೀಗೆ ಅಂತ ಕೇಳೋದಿಲ್ಲ.