Sunday, October 26, 2008

ದೀಪದ ಹಬ್ಬದ ಶುಭಾಶಯ


ಅಡೋಬ್ ಫೋಟೋಶಾಪ್ ನಲ್ಲಿ (for the first time ) ನಾನೆ ಮಾಡಿದ ಶುಭಾಶಯ ಪತ್ರ. ಇಲ್ಲಿವರ್ಗೂ ಅದನ್ನ ಓಪನ್ನು ಮಾಡಿರಲಿಲ್ಲ. ಕನ್ನಡ ಶುಭಾಶಯಪತ್ರಗಳನ್ನು ಹುಡುಕಿದೆ...ಅದನ್ನ ಹುಡುಕುವುದರ ಬದಲು ನಾನೇ ಮಾಡಿದರೆ ಆ ಖುಶಿ ಬೇರೆ ಅನ್ನಿಸಿತು. ಅದಕ್ಕೆ ಐದು ಘಂಟೆಗಳ ಕಾಲ ಕಷ್ಟ ಪಟ್ಟು, ಫೋಟೋಶಾಪ್ ಉಪಯೋಗಿಸುವುದನ್ನು ತಕ್ಕ ಮಟ್ಟಿಗೆ ಕಲಿತು ಇದನ್ನ ಮಾಡಿದ್ದೇನೆ. ನಿಮಗೆಲ್ಲರಿಗೂ ಈ ದೀಪದ ಹಬ್ಬ ಸುಖ ಸಂತೋಷ, ನೆಮ್ಮದಿ, ಆಯಸ್ಸು, ಆರೋಗ್ಯ ಹಾಗೂ ನೆಮ್ಮದಿಯನ್ನು ಕೊಟ್ಟು ಬಾಳಿನಲ್ಲಿ ಬೆಳಕು ಮೂಡಿಸಲಿ ಎಂದು ಹಾರೈಸುತ್ತೇನೆ.

ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು.

Tuesday, October 21, 2008

ತಮಾಷೆಗೆ ಮಿತಿಯಿಲ್ಲವೇ ?

ನೀವು ಈ ಪೋಸ್ಟನ್ನು ಓದಿದ ಮೇಲೆ " ಈ ಹುಡುಗಿ ಗೆ sense of humor ಸ್ವಲ್ಪ ಕಡಿಮೆ, She does not know how to take issues in good spirits " ಅಂತ ಅಂದುಕೊಂಡರೂ ಪರ್ವಾಗಿಲ್ಲ. ಆದರೆ ಇದು ನಿಜವಾಗಿಯೂ ಬೇಜಾರು ತರಿಸುವಂಥ ವಿಷಯ.

ಮೋಟೋರೋಲಾ ದ ಹೊಸ ಮೊಬೈಲ್ ಫೋನಿನ ಜಾಹೀರಾತನ್ನು ಈಗಾಗಲೇ ನೀವೆಲ್ಲರೂ ನೋಡಿರುತ್ತೀರಿ. ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗುರುಗಳ ವ್ಯಂಗ್ಯಚಿತ್ರವನ್ನು ಫೋನಿನಲ್ಲಿ ಬಿಡಿಸಿ ಈಮೈಲ್ ಮಾಡುವ ಈ ಜಾಹೀರಾತು ಹುಡುಗರಿಗೆ ಈಗ ಅಧ್ಯಾಪಕರನ್ನು ಆಡಿಕೊಳ್ಳುವ ಹೊಸ ಆಯಾಮವನ್ನು ಪರಿಚಯ ಮಾಡಿಸುತ್ತಿದೆ. ನಾವೂ ಕಾಲೇಜಿನಲ್ಲಿ ಓದಿದವರೇ. ಲೆಕ್ಚರರ್ ಗಳನ್ನು ನಾವೂ ಆಡಿಕೊಳ್ಳುತ್ತಿದ್ದೆವು. ಇಲ್ಲವೆಂದು ನಾನು ಖಂಡಿತಾ ಹೇಳುವುದಿಲ್ಲ. ಆದರೆ ಅವರ ಮೇಲಿನ ಗೌರವ ನಮಗೆ ಬೆಟ್ಟದಷ್ಟಿದೆ. ಗುರುಗಳನ್ನು ನಾವೆಂದಿಗೂ ಈ ಪರಿಯ ಅವಮಾನ ಮಾಡಿರಲಿಲ್ಲ. ಬದುಕಿನ ಪಾಠ ಕಲಿಸುವ ಗುರುಗಳಿಗೆ ಈ ಪರಿಯ ಅವಮಾನವೇ ?ತಮಾಷೆಗೆ ಮಿತಿಯಿಲ್ಲವೇ ? ಸದಾ ಗೌರವಿಸಿ, ಅವರು ಹೇಳಿಕೊಟ್ಟ ಆದರ್ಶಗಳನ್ನು ಪಾಲಿಸಬೇಕಾದ ಗುರುಗಳನ್ನು ಈ ತರಹ ಅವಹೇಳನ ಮಾಡಿರುವುದು ಸರಿಯೇ ?


ನಿಜವಾಗಿಯೂ ಈ ಜಾಹಿರಾತಿನವರು ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಬೇಕಿದ್ದಿದ್ದರೆ ಬಹಳ ಸ್ಪೀಡಾಗಿ ನೋಟ್ಸನ್ನು ದಿಕ್ಟೇಟ್ ಮಾಡುತ್ತಿದ್ದ ಲೆಕ್ಚರರ್ ನ ನೋಟ್ಸನ್ನು ಫೋನಲ್ಲಿ ಗೀಚಿಕೊಂಡು, ನೋಟ್ಸ್ ನಲ್ಲಿ ನೀಟಾಗಿ ಕಾಪಿ ಮಾಡಿ ಮಾರನೆಯ ದಿನ ಸೈ ಅನ್ನಿಸಿಕೊಂಡು ರಹಸ್ಯವಾಗಿ ತನ್ನ ಮೊಬೈಲ್ ಫೋನಿನ ಸಮರ್ಥ ಉಪಯೋಗವನ್ನು ತೋರಿಸಬಹುದಿತ್ತು.ಇವ ಬರೆದ ವ್ಯಂಗ್ಯ ಚಿತ್ರಕ್ಕಿಂತ ಉಪಯುಕ್ತವಾದ ಕೆಲಸವಲ್ಲವೇ ಅದು? ನಾನು ನನ್ನ ಎಮ್.ಎಸ್ಸಿಯ ಅವಧಿಯಲ್ಲಿ ನಡೆದ ಎಲ್ಲ ಅತಿಥಿ ಭಾಷಣಗಳನ್ನು ರೆಕಾರ್ಡ್ ಮಾಡಿ ಎಕ್ಸಾಮಿಗೆ ಅದನ್ನು ಕೇಳಿಕೊಂಡು ನೋಟ್ಸ್ ಮಾಡಿ ಓದಿದ್ದೆ. ಯಾಕಂದರೆ ನಮಗೆ ಪವರ್ ಪಾಯಿಂಟ್ ನಲ್ಲಿ ಪಾಠಗಳು ಸಾಗುತ್ತಿದ್ದವು. ನಂತರ ಅವುಗಳನ್ನು ನಮಗೆ ಈಮೈಲ್ ಮಾಡಲಾಗುತ್ತಿತ್ತು. ಈಮೈಲ್ ನಲ್ಲಿ ಪಾಠ ಓದಿ, ಮೀಡಿಯಾ ಪ್ಲೇಯರ್ ನಲ್ಲಿ ಪಾಠ ಕೇಳುತ್ತಿದ್ದೆ.

ಮೊಬೈಲ್ ತರಬಾರದೆಂದು ಈಗೀಗ ಶಾಲಾಕಾಲೇಜುಗಳಲ್ಲಿ ಆಜ್ಞೆ ಇದೆಯಾದರೂ ಈಗಿನ ಮಕ್ಕಳು ಈ ಜಾಹಿರಾತನ್ನು ನೋಡಿದ್ದೇ ಇದೇ ಮೊಬೈಲನ್ನು ತೆಗೆಸಿಕೊಡಬೇಕೆಂದು ತಂದೆ ತಾಯಿರನ್ನು ಪೀಡಿಸಲು ಶುರುಮಾಡುತ್ತಾರೆ. ತಾಯ್ತಂದೆಯರೂ ಕೂಡಾ ಇವರ ಹಠದ ಮುಂದೆ ನಿಸ್ಸಹಾಯಕರಾಗುತ್ತಾರೆ. ಮೊಬೈಲ್ ತಂದು ಕೈಗಿಡಬೇಕಾಗುತ್ತದೆ. ಇವರು ಕದ್ದು ಮುಚ್ಚಿ ಅದನ್ನು ಶಾಲೆಗೆ ತಗೆದುಕೊಂಡು ಹೋಗಿ, ಸಿಕ್ಕಿಹಾಕಿಕೊಂಡು ಕಡೆಗೆ ಪರದಾಡುತ್ತಾರೆ. ಬೇಕೇ ಇವೆಲ್ಲಾ ?

ಈಗಾಗಲೇ ಚಲನಚಿತ್ರಗಳು ಮಕ್ಕಳಲ್ಲಿ ಗುರುಗಳ ಬಗ್ಗೆಗಿನ ಭಾವನೆಯನ್ನು ಬೇಕಾದಷ್ಟು ಬಿಗಡಾಯಿಸುವ ಮಹಾನ್ ಪುಣ್ಯಕಾರ್ಯ ಮಾಡಿದೆ. ಇದೊಂದು ಬಾಕಿಯಿತ್ತು ಅಂತ ಕಾಣತ್ತೆ.

ಎಲ್ಲರ ಜೀವನದಲ್ಲಿ ಗುರುಶಿಷ್ಯ ಸಂಬಂಧ ಚೆನ್ನಾಗಿಲ್ಲದಿರಬಹುದು. ನಾನಿದನ್ನು ವಿಸ್ತರಿಸಿ ಹೇಳುವ ಅವಶ್ಯಕತೆ ಇಲ್ಲವೆಂದುಕೊಳ್ಳುತ್ತೇನೆ. ಆದರೆ ಎಲ್ಲರ ಜೀವನದಲ್ಲೂ "favorite teacher" ಅನ್ನುವವರೊಬ್ಬರಾದರೂ ಇರುತ್ತಾರಲ್ಲವೇ ? ಈ ತರಹದ ಜಾಹಿರಾತನ್ನು ಮಾಡುವ ಮುನ್ನ Ad director ಗೆ ತನ್ನ Director ಗುರುಗಳು, ಪಾತ್ರಧಾರಿಗಳಿಗೆ ತಮ್ಮ ಗುರುಗಳ ನೆನಪಾಗದಿರುವುದು ವಿಪರ್ಯಾಸ.

ಈಗಿನ ಶಾಲಾ ವಿದ್ಯಾರ್ಥಿಗಳಿಗೆ ಅಧ್ಯಾಪಕರ ಮೇಲೆ ಗೌರವವೇ ಇಲ್ಲವೆಂದು ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿರುವ ನಮ್ಮ ಸೋದರತ್ತೆ ಮೊನ್ನೆ ಅಳಲು ತೋಡಿಕೊಳ್ಳುತ್ತಿದ್ದರು.ನನ್ನ ಗೆಳತಿಯರು ಈಗ ಕಾಲೇಜುಗಳಲ್ಲಿ ಅಧ್ಯಾಪಕಿಯರು. ಅವರ ಅಳಲೂ ಇದೇ.ಅಧ್ಯಾಪಕರು ಸ್ನೇಹಿತರಂತೆ ವರ್ತಿಸಬೇಕಾದದ್ದು ನಿಜವೇ ಆದರೂ, ಆ ಸ್ನೇಹಕ್ಕೆ ಒಂದು ಬಿಗಿ, ಹಿಡಿತ ಇರಬೇಕು. ಸಲುಗೆ ಕಡಿಮೆ, ಗೌರವ ಹೆಚ್ಚಿರಬೇಕು. ಆದರಯುಕ್ತ ಅಭಿಮಾನವಿರಬೇಕು. ಎಲ್ಲರನ್ನು ಸ್ನೇಹಿತರಾಗಿಯೇ ಕಾಣುವುದಾದರೆ ಅಪ್ಪ, ಅಮ್ಮ, ಗುರು ಅನ್ನುವ ನಿರ್ದಿಷ್ಟ ಸಂಬಂಧಗಳು ಇರುತ್ತಿದ್ದವೇ ?

ಇಂದು ಸಂಬಂಧಗಳೆಲ್ಲಾ ಹಗ್ಗಾಗುತ್ತಿವೆ, ಗೌರವವನ್ನು ಗಾಳಿಗೆ ತೂರಿಬಿಡಲಾಗಿದೆ. ಯಾಕೆ ಹೀಗೆ ?

Thursday, October 16, 2008

ಬೊಂಬೆಗಳನ್ನು ಏಕೆ ಕೂರಿಸುತ್ತೇವೆ ?

" ನಿಮ್ಮ ಮನೆಯಲ್ಲಿ ಬೊಂಬೆ ಕೂರಿಸಿದ್ದಾರಾ?"

ಈ ಪ್ರಶ್ನೆಯನ್ನು ಸಂಗೀತ ಕಲಿಯಲು ಬರುವ ಪುಟ್ಟ ಮಕ್ಕಳಿಗೆ ಹದಿನೈದು ದಿನಗಳ ಹಿಂದೆ ಕೇಳಿದರು ನಮ್ಮಮ್ಮ. ಅದಕ್ಕೆ ಆ ಮಕ್ಕಳು ಅಷ್ಟೇ ಮುದ್ದಾಗಿ, " what it is teacher ? " ಅಂತ ಕೇಳಿಬಿಟ್ಟರು !!

ಅಮ್ಮ ಸ್ವಲ್ಪ ಚಕಿತಗೊಂಡರಾದರೂ, ಸ್ವಲ್ಪ ಸಾವರಿಸಿಕೊಂಡು, " ನಿಮ್ಮ ಮನೆಯಲ್ಲಿ ಯಾವ ಯಾವ ಬೊಂಬೆಗಳಿವೆ ? " ಅಂತ ಕೇಳಿದರು. ಹೆಣ್ಣು ಮಕ್ಕಳು ಬಹಳ ನೀಟಾಗಿ ಬಾರ್ಬಿ ಡಾಲುಗಳ ಎಲ್ಲಾ ವರ್ಷನ್ನುಗಳನ್ನು ಒಪ್ಪಿಸಿದರು. ಗಂಡು ಮಕ್ಕಳು ಕಾರು, ಏರೋಪ್ಲೇನು, ಪೋಕೆಮಾನು, ಜಿ ಐ ಜೋ ಮುಂತಾದವುಗಳ ಪಟ್ಟಿ ಇಟ್ಟರು. ನಮ್ಮಮ್ಮ ಆಗ ಬೊಂಬೆಗಳ ಕಥೆ ಹೇಳಲು ಶುರುಮಾಡಿದರು.

ಭಾರತದಲ್ಲಿ ಬಹಳ ಹಿಂದೆ ಭೋಜರಾಜ ಎಂಬ ಅರಸು ಇದ್ದನು. ಅವನ ರಾಜ್ಯದ ರಾಜಧಾನಿ ಉಜ್ಜಯಿನಿ ನಗರ. ಅವನ ರಾಜ್ಯದಲ್ಲಿ ಬೊಂಬೆಗಳಿಗೆ ರಾತ್ರಿ ಹೊತ್ತು ಜೀವ ಬರುತ್ತಿತ್ತಂತೆ ! ಅವು ರಾಜನ ವ್ಯಕ್ತಿತ್ವ, ನೀತಿ, ನಿಯಮಗಳು, ರಾಜ್ಯದ ಒಳಿತು ಕೆಡಕುಗಳ ಬಗ್ಗೆ ಚರ್ಚಿಸುತ್ತಿದ್ದವಂತೆ. ಒಂದು ರಾತ್ರಿ ಇದನ್ನು ಸ್ವತಃ ಭೋಜರಾಜನೇ ನೋಡಿದ್ದನಂತೆ. ಆಗ ಬೊಂಬೆಗಳು ಅವನಿಗೆ ಕೆಲವು ರಾಜನೀತಿಗಳನ್ನು ಬೋಧಿಸಿದನೆಂದು ನಮ್ಮಮ್ಮ ಹೇಳಿದರು.

ಮತ್ತೊಂದು ಮಗು , " ನಮಗೆ ಟೀಚರ್ tin soldier ಎಂಬ ಕಾಲು ಮುರಿದ ಸೈನಿಕ ಬೊಂಬೆಯ ಕಥೆ ಹೇಳಿದ್ದಾರೆ. ಈ ಕಥೆ ನೂ ಅದೇ ಥರ ಇದೆ !! "ಅಂತು.

ತತ್ ಕ್ಷಣವೇ ಒಂದು ಮಗು, " ಟೀಚರ್, ನಿಮಗೆ ಈ ಕಥೆ ಯಾರು ಹೇಳಿದ್ದು ? " ಅಂತ ಕೇಳಿತು. ಅದಕ್ಕೆನ್ ನಮ್ಮಮ್ಮ, "ನಮ್ಮಮ್ಮ ಹೇಳಿದ್ದು ! " ಅಂದರು !!

ಅದಕ್ಕೆ ಅಮ್ಮ, " ನಿನ್ನ tin soldier ಕಥೆ ಬರುವ ಸಾವಿರಾರು ವರ್ಷಗಳ ಮುಂಚೆ ಈ ಕಥೆ ಬಂದಿದೆ ಪುಟಾಣಿ ! ಮತ್ತೊಂದು ಕಥೆ ಇದೆ. ರಾಜ ವಿಕ್ರಮಾದಿತ್ಯನ ಕಾಲದಲ್ಲೂ ಬೊಂಬೆಗಳಿಗೆ ಜೀವ ಬಂದು ಅವೂ ವಿಕ್ರಮಾದಿತ್ಯನ ಜೊತೆ ಮಾತಾಡುತ್ತಿದ್ದವು ಎಂದು ಕಥೆ ಇದೆ. "

ಮಕ್ಕಳು ಬಿಟ್ಟ ಕಣ್ಣು ಬಿಟ್ಟುಕೊಂಡು ಕಥೆ ಕೇಳುತ್ತಿದ್ದರು. ಅಮ್ಮ ಮುಂದುವರೆಸಿದರು - " ನಾವು ಚಿಕ್ಕ ಮಕ್ಕಳಾಗಿದ್ದಾಗ ನವರಾತ್ರಿಯಲ್ಲಿ ಸಾಯಂಕಾಲ ಐದು ಘಂಟೆಗೆ ರೆಡಿಯಾಗಿ, ಕ್ಯಾರಿಯರ್ ಒಂದನ್ನು ಹಿಡಿದುಕೊಂಡು, ನಮ್ಮ ಏರಿಯಾದ ಪ್ರತಿಯೊಂದು ಮನೆಗೂ ಹೋಗಿ "ಬೊಂಬೆ ಕೂರ್ಸಿದ್ದೀರಾ ? " ಅಂತ ಕೇಳ್ಕೊಂಡ್ ಹೋಗ್ತಿದ್ವಿ. ಎಲ್ಲರ ಮನೆಯಲ್ಲೂ ಹಾಡು ಹೇಳಿ, ಅವರು ಕೊಟ್ಟ ಬೊಂಬೆ ಬಾಗಿನಗಳನ್ನು ಕ್ಯಾರಿಯರ್ ನಲ್ಲಿ ಹಾಕಿಕೊಂಡು ಬಂದು, ಮನೆಯಲ್ಲಿ ನಾವು ಅಣ್ಣ ತಂಗಿ ಅಕ್ಕ ತಮ್ಮಂದಿರು ಹಂಚಿಕೊಂಡು ತಿನ್ನುತ್ತಿದ್ದೆವು " ಅಂದಾಗ, ಮಕ್ಕಳೆಲ್ಲ ಕಣ್ಣು ಅಗಲಿಸಿದವು !! ಅಮ್ಮ ನಮ್ಮ ಮನೆಯಲ್ಲಿದ್ದ ಬೊಂಬೆಗಳನ್ನು ತೋರಿಸಿ, ಕಥೆ ಹೇಳಿ, ಬೊಂಬೆ ಬಾಗಿನ ಕೊಟ್ಟು ಕಳಿಸಿದರು.

ನಾನು ಯಥಾಪ್ರಕಾರ ಸಾಯಂಕಾಲದ ಕಾಫಿಯನ್ನು ಸವಿಯುತ್ತಾ ಇವರ ಸಂಭಾಷಣೆಯನ್ನು ಮೌನವಾಗಿ ಆಲಿಸುತ್ತಿದ್ದೆ.

ಈಗ ಬೊಂಬೆ ಕೂರಿಸುವ ಸಂಪ್ರದಾಯವೆಲ್ಲ ತೀರ ಕಡಿಮೆಯಾಗಿ ಹೋಗಿದೆ. ಕೆಲವು ಮನೆಗಳಲ್ಲಿ ಬೊಂಬೆಗಳನ್ನು ಹಾಲು ಪೂರ್ತಿ ಕೂರಿಸಿರುತ್ತಾರೆ...ಟಿವಿಯಲ್ಲೂ ನೋಡಿರುತ್ತೀರಿ ಇದನ್ನೆಲ್ಲ ನೀವು. ಆದರೆ ನಮ್ಮ ಮನೆಯಲ್ಲಿ ಅಷ್ಟು ದೊಡ್ಡದಾಗಿ ಕೂರಿಸದಿದ್ದರೂ ಈ ಸಂಪ್ರದಾಯವನ್ನು ಇನ್ನೂ ಪರಿಪಾಲಿಸಲಾಗುತ್ತಿದೆ ಅಂತ ಹೇಳಿಕೊಳ್ಳೋಕೆ ನನಗೊಂಥರಾ ಸಂತೋಷ ಆಗತ್ತೆ. ಚಿಕ್ಕವಯಸ್ಸಿನಲ್ಲಿ ನನ್ನ ಇಬ್ಬರೂ ಅಜ್ಜಿಯರು ನನಗೆ ಒಂದೊಂದೇ ಗೊಂಬೆಯನ್ನು ತೋರಿಸಿ ಕಥೆ ಹೇಳುತ್ತಿದ್ದರು. ಪುರಾಣದ ಕಥೆಗಳೆಲ್ಲ ನನಗೆ ಗೊತ್ತಾಗುತ್ತಿದ್ದೇ ನವರಾತ್ರಿಯಲ್ಲಿ. ಪ್ರತಿ ದಿನ ಹೇಳುತ್ತಿದ್ದ ಕಥೆಗಳಿಗಿಂತಾ ನನಗೆ ಈ ಬೊಂಬೆ ತೋರಿಸಿ ಹೇಳುತ್ತಿದ್ದ ಕಥೆಗಳು ತುಂಬಾ ಕುತೂಹಲಕಾರಿ, ಆಕರ್ಷಕ ಅನ್ನಿಸುತ್ತಿದ್ದವು. ಅದೊಂದು ರೀತಿಯ ನೀತಿಪಾಠವಾಗಿತ್ತು ನನಗೆ. ಈಗ....

ನಮ್ಮ ಮನೆಗೆ ಬೊಂಬೆ ನೋಡಲು ಒಬ್ಬಾಕೆ ಬಂದಿದ್ದರು.ಏನೂ ಖಾಯಿಲೆ ಇರದವರು. ಅವರ ಮನೆಯಲ್ಲಿ ಕೈಗೊಬ್ಬರು ಕಾಲಿಗೊಬ್ಬರು ಆಳು, ಬಂಗಲೆಯಂಥಾ ಮನೆ. ಅವರಿಗೆ ಟಿವಿಯಲ್ಲಿನ ಸೀರಿಯಲ್ಲು ನೋಡಲು ಸಮಯ ಸಾಲದು ಅಂತ ಬಂದು ಅಳಲು ತೋಡಿಕೊಳ್ಳುತ್ತಿದ್ದರು. ನಾವು ನಾಲ್ಕು ದಿನದಿಂದ ಅಟ್ಟದ ಮೇಲಿಂದ ಬೊಂಬೆಗಳನ್ನು ಕೆಳಗಿಳಿಸಿಕೊಂಡು, ಅವುಗಳ ಪ್ಯಾಕ್ ಬಿಚ್ಚಿ, ಸ್ಟೆಪ್ಪುಗಳಿಗೆ ನಮ್ಮ ಸ್ಟಡಿ ಟೇಬಲ್ಲುಗಳನ್ನು ಎಳೆದು, ಪಂಚೆ ಹೊದಿಸಿ, ಎಲ್ಲಾ ಮಾಡಿದ್ದನ್ನು ನೋಡಿ ಕೇಳಿದರು... "ಏನಮ್ಮ, ನಿನಗೆಷ್ಟು ಟೈಮ್ ಇರತ್ತೆ ? ಟಿವಿಯಲ್ಲಿನ ಸೀರಿಯಲ್ಲು ನೋಡಲು ಸಮಯ ಸಾಲದು ನನಗೆ...ನೀವು ಮೂರು ಜನ ಇಷ್ಟೆಲ್ಲಾ ಮಾಡಿದ್ದೀರ... ನನಗೆ ನೋಡಿ, ಟೈಮ್ ಆಗೋದೇ ಇಲ್ಲ! "

ನಾನು ಹೇಳಬೇಕೆಂದಿದ್ದೆ " ಇದಕ್ಕೆ ವಯಸ್ಸು, ಟೈಮಿನ ನಿರ್ಬಂಧವಿಲ್ಲ. ಇಂಟೆರೆಸ್ಟಿದ್ದರೆ ಟೈಮ್ ತಂತಾನೇ ಆಗತ್ತೆ " ಅಂತ. ಆದರೆ, ನಾನು " ಕೊಲ್ಲುವ ಮೌನದ " ಬಗ್ಗೆ ರಿಸರ್ಚು ಮಾಡುತ್ತಿದ್ದೆಯಾದ್ದರಿಂದ, ಮಾತಾಡಲಿಲ್ಲ. ಸುಮ್ಮನೆ ನಕ್ಕೆ.

ಮತ್ತೊಂದು ಆಶ್ಚರ್ಯಕರ ವಿಷಯ ಎಂದರೆ, ಇದಕ್ಕೆ ಪದ್ಧತಿ ಇರಬೇಕಂತೆ ! ಅಲ್ಲ, ನಮ್ಮ ಸೃಜನಸ್ಜೀಲತೆ ಮತ್ತು ಕಲಾನೈಪುಣ್ಯತೆಗೂ, ಪದ್ಧತಿಗೂ ಎನು ಸಂಬಂಧ ? ಒಂಭತ್ತು ದಿನಗಳು ಹೊಸ ಹೊಸ ತಿಂಡಿ, ಹೊಸ ಜನ, ಹೊಸ ಉತ್ಸಾಹಕ್ಕೆ ಪದ್ಧತಿಯ ಬಂಧನವೇಕೆ ? ಪದ್ಧತಿ ಇಲ್ಲದವರು ಬೆಳೆಸಿಕೊಳ್ಳಲು ಅವಕಾಶ ಇಲ್ಲ ಯಾಕೆ ?

ಮಾಡಲಾಗದ ಪ್ರತಿಯೊಂದು ಕೆಲಸಕ್ಕೂ ನಾವು ಕಾರಣ ಕೋಟಿಗಟ್ಟಲೆ ಕೊಡಬಹುದು. ಆದರೆ ಅದು genuine ಆಗಿರಬೇಕಲ್ಲವೇ? ನಮ್ಮ ಬ್ಯುಸಿ ಜೀವನದಲ್ಲಿ ಇಂಥಾ ಹಬ್ಬಗಳು ಒಂದು change ಅಲ್ಲವೇ? We need a break, we are tensed, we need a change ಅಂತೆಲ್ಲಾ ಗೋಳಾಡಿಕೊಂಡು, ನಮ್ಮ ಕ್ರಿಯಾಶೀಲತೆ, ಆಸಕ್ತಿ ಮತ್ತು ಕೌಶಲ್ಯಗಳನ್ನು ಪ್ರದರ್ಶನ ಮಾಡುವ ಸಮಯ ಬಂದಾಗ "No time! " ಎಂದು ಸಿಕ್ಕ ಅವಕಾಶವನ್ನೂ ಕಳೆದುಕೊಳ್ಳುತ್ತೀವಲ್ಲಾ... ನಾವೇಕೆ ಹೀಗೆ ?

ಇಂದಿಗೆ ನಾವೇಕೆ ಹೀಗೆ ಬ್ಲಾಗ್ ಶುರುವಾಗಿ ಒಂದು ವರ್ಷವಾಯಿತು. ತಿಂಗಳಿಗೊಂದು ಪೋಸ್ಟ್ ಹಾಕುತ್ತಿದ್ದೆ, ನೀವೂ ಓದಿ, ಕಮೆಂಟಿಸಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದೀರಿ. ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ.

ನಮ್ಮ ಮನೆಯಲ್ಲಿ ಈ ಬಾರಿ ದಸರೆಯಲ್ಲಿ ಕೂರಿಸಿದ ಬೊಂಬೆಗಳ ವೀಡಿಯೋ ಇಲ್ಲಿ ಹಾಕುತ್ತಿದ್ದೇನೆ. ಸಾಮಾನ್ಯವಾಗಿ ನಾವು ಹಾಲು ಪೂರ್ತಿ ಕೂರಿಸುತ್ತಿದ್ದೆವು. ಆದರೆ, ನಮಗೆ ಈ ಬಾರಿ ಸ್ಟೆಪ್ಪುಗಳ ಅಭಾವವಾಯ್ತು ಸ್ವಲ್ಪ. ಎರಡು ಅಟ್ಟಗಳ ಮೇಲಿನ ಬೊಂಬೆಗಳನ್ನ ಕೆಳಗಿಳಿಸಲಿಲ್ಲ ಅದಕ್ಕೆ. ಈ ಬಾರಿ ಇಷ್ಟೇ ಕೂರಿಸಲು ಸಾಧ್ಯವಾಗಿದ್ದು. ರಾಗಿ ಪೈರು ಬೆಳೆಸಿ ಪಾರ್ಕ್ ಕೂಡಾ ಮಾಡಲಾಗಲಿಲ್ಲ ಎಂಬುದು ಮತ್ತೊಂದು ಬೇಜಾರು. ನೋಡಿ ನಮ್ಮ ಮನೆಯ ಬೊಂಬೆಗಳನ್ನ...ಹೇಗಿವೆ ಅಂತ ಹೇಳಿ.





ಆಮೇಲೆ, ಬೊಂಬೆ ಬಾಗಿನದ ಫೋಟೋ ಕೂಡಾ ಹಾಕುತ್ತಿದ್ದೇನೆ, ನೋಡಿ, ತಿಂದಿದ್ದೀನಿ ಅಂತ ಅಂದುಕೊಂಡು ಬಿಡಿ ! :-) ಹಾ...ಯಾರು ಮಾತಾಡಿರೋದು ವೀಡಿಯೋ ಲಿ ಅಂತ ನೀವು ಯೋಚನೆ ಮಾಡಬೇಕಿಲ್ಲ, ವಿಡಿಯೋ ತೆಗೆಯಲು ನನ್ನ ರಿಸರ್ಚಿಗೆ ಒಂದು ಬ್ರೇಕ್ ಕೊಟ್ಟಿದ್ದೆ :-)