Monday, March 23, 2009

ಛೇ ! ಇದನ್ನು ಮಾಡುವ ಬದಲು ನಾನಂದುಕೊಂಡಿದ್ದನ್ನೇ ಮಾಡಬೇಕಿತ್ತು

ಈ ಘಟನ ನಡೆದು ಸರಿಯಾಗಿ ಆರು ವರ್ಷ ಕಳೆದಿದೆ.[ ಸಾಕು...ನಿನ್ನ..ಈ ಹಳೆಯ ಫ್ಲಾಷ್ ಬ್ಯಾಕು ಅಂತ ಹಾಡದೇ ಇದೊಂದು ಫ್ಲಾಷ್ ಬ್ಯಾಕ್ ನ ಸಹಿಸಿಕೊಳ್ಳಿ ದಯವಿಟ್ಟು :) ]

ನಮ್ಮ ಮನೆಯ ಪೇಯಿಂಟಿಂಗ್ ಕೆಲಸ ನಡಿಯುತ್ತಿತ್ತು. ಮನೆಗಳ ಸಾಮಾನೆಲ್ಲ ಅಲ್ಲೋಲ ಕಲ್ಲೋಲ. ಅದೇ ಸ್ಥಿತಿ ನನ್ನ ಮನಸ್ಸಿನದ್ದೂ ! ರಿಸಲ್ಟು ಬಂದು ಒಂದು ವಾರವಾಗಿತ್ತಷ್ಟೇ. ತೊಂಭತ್ತು ಪ್ರತಿಶತ ನಿರೀಕ್ಷಿಸಿದ್ದ ನಾನು ಎಂಭತ್ತೆರಡಕ್ಕೇ ತೃಪ್ತಿ ಪಡಬೇಕಾಯ್ತು. ಭೌತಶಾಸ್ತ್ರದಲ್ಲಿ ನೂರಕ್ಕೆ ನೂರು ಗ್ಯಾರಂಟೀ ಎಂದುಕೊಂಡಿದ್ದ ನಾನು ತೊಂಭತ್ಮೂರು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದೆ. ರಿವಾಲ್ಯುಯೇಷನ್ ಹಾಕಲು ಪಟ್ಟು ಹಿಡಿದಿದ್ದೆ, ಅಣ್ಣ(ಅಪ್ಪನನ್ನು ಅಣ್ಣ ಎನ್ನುತ್ತೇವೆ ನಾವು) ಪ್ರಯೋಜನ ಇಲ್ಲ ಸುಮ್ಮನಿರು ಅಂತ ಸಮಾಧಾನ ಪಡಿಸಿ ಸುಸ್ತಾಗಿದ್ದರು. ಸಿ.ಇ.ಟಿ ಪರೀಕ್ಷೆಯ ರಿಸಲ್ಟು ನನಗೆ ಮುಖ್ಯವಾಗಿರಲಿಲ್ಲ. ನಾನು ಸುಮ್ಮನೇ ಪರೀಕ್ಷೆ ಬರೆದಿದ್ದೆ.

ಅಂದಿನ ರಾತ್ರಿ ನಮ್ಮ ತಂದೆ ಬಂದು " ಲಕ್ಷ್ಮೀ, ಇವತ್ತು ನನ್ನ ಗೆಳೆಯರೊಬ್ಬರು ದಾರಿಯಲ್ಲಿ ಸಿಕ್ಕು ನಿನ್ನ ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಕೇಳಿದರು. ನಾನು ಹೇಳಿದೆ. ಅದಕ್ಕೆ ಅವರು ಹೀಗಂದರು - " ಸಾರ್, ಈಗ ಸ್ಕೋಪ್ ಇರೋದು ಎಂಜಿನೀರಿಂಗ್ ನಲ್ಲೇ...ಮಾಡಿಸಿ ನಿಮ್ಮ ಮಗಳನ್ನೂ ಎಂಜಿನಿಯರ್...ಇನ್ನು ನಾಲ್ಕು ವರ್ಷ ಆದ ಮೇಲೆ ಲಕ್ಷಗಟ್ಟಲೆ ಸಂಬಳ ಎಣಿಸುತ್ತಾಳೆ ನಿಮ್ಮ ಮಗಳು." ನಿನಗೇನನ್ನಿಸತ್ತೆ ?"ಅಂತ ಕೇಳಿದರು.

ನಾನು ಬಾಯಿ ಬಿಡುವಷ್ಟರಲ್ಲಿ ಫೋನು ರಿಂಗಾಯ್ತು. ಫೋನು ನಮ್ಮ ಸಂಬಂಧಿಕರದ್ದಾಗಿತ್ತು. ಅಣ್ಣನಿಗಿಂತಾ ಹಿರಿಯರು. ನನ್ನ ಭವಿಷ್ಯದ ನಿರ್ಧಾರವನ್ನು ಅವರು ತೆಗೆದುಕೊಳ್ಳುವ ಪುಣ್ಯಕಾರ್ಯ (?) ಮಾಡುತ್ತಿದ್ದರು . ಅಣ್ಣ speakerphone ಆನ್ ಮಾಡಿದರು. " ನಮ್ಮ ವಂಶದಲ್ಲಿ ಯಾರೂ ವೈದ್ಯರಿಲ್ಲ. ಸಾಲವೋ ಸೋಲವೋ, ಡಾಕ್ಟರ್ ಮಾಡು ಅವಳನ್ನ. ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗತ್ತೆ. ಆಮೇಲೆ ಅವಳೇ ದುಡ್ಡು ತೀರಿಸುತ್ತಾಳೆ ಅಷ್ಟೇ. ಇದರಲ್ಲಿ ಯೋಚಿಸುವ ಪ್ರಶ್ನೆಯಾಗಲಿ, ಅವಳ ಇಷ್ಟ ಕಷ್ಟಗಳನ್ನು ಕೇಳುವ ಪ್ರಮೇಯವಾಗಲಿ ಬರುವುದೇ ಇಲ್ಲ. ನಾವು ದೊಡ್ಡವರು ಹೇಳಿದ ಮಾತನ್ನು ಚಾ ಚೂ ತಪ್ಪದೇ ಕೇಳಬೇಕಾಗಿರುವುದು ಅವರ ಕರ್ತವ್ಯ. ದುಡ್ಡು ಹೇಗೆ ಹೊಂದಿಸಬೇಕೆಂದು ನಾನು ಹೇಳಬೇಕಿಲ್ಲ ಅಲ್ವಾ ?" ಅಂತ ಒಂದಿಷ್ಟು ಮಾತಾಡಿ ಫೋನಿಟ್ಟರು.

ಮನೆಯ ಹಿರಿಮಗಳಾದ ನಾನು ಇದನ್ನ ಕೇಳಿ ಗಹಗಹಿಸಿ ನಕ್ಕೆ. ಅಣ್ಣ ನನ್ನ ಮುಖ ನೋಡಿದರು. " ಯಾಕೆ ನಗ್ತಿಯಾ ?" ಅಂತ ಕೇಳಿದರು. ಆಗ ನಾನಂದೆ,

"ವಂಶದ ಗೌರವ ಕಾಪಾಡಕ್ಕೆ ನಾನು ಡಾಕ್ಟರ್ ಆಗ್ಬೇಕಾ ? ನನಗೆ ವೈದ್ಯ ವೃತ್ತಿಯಲ್ಲಿ ಮೊದಲಿಂದಲೂ ಆಸಕ್ತಿಯಿಲ್ಲ ಅಣ್ಣ.."
ಅಣ್ಣ : "ಆ ವಿಷಯ ಬಿಡು..ತಲೆಗೊಂದು ಮಾತಾಡುವುದು ಜನರ characteristic. ನಿನಗೆ ಇಷ್ಟ ಇಲ್ಲ ಅಂದ್ರೆ ನನ್ನ ಬಲವಂತ ಏನೂ ಇಲ್ಲ. ಎಂಜಿನೀರ್ ಆಗ್ತ್ಯಾ ?"

"ಉಹೂಂ. ಇಲ್ಲ"

"ಮತ್ತೆ ?"

" ನನಗೆ ಚಿಕ್ಕಂದಿನಿಂದಲೂ ಸಂಶೋಧನೆಯ ಕಡೆ ಹೆಚ್ಚು ಒಲವು. ನಾನು basic sciences ತಗೊಳ್ಳಲಾ ?"

ಅಣ್ಣ: " ನಿನ್ನ ಇಷ್ಟಕ್ಕೆ ನಮ್ಮ ಅಭ್ಯಂತರ ಏನಿಲ್ಲ. ಆದರೆ mediocre B.Sc ಮತ್ತು average M.Sc ಆದ್ರೆ ಸಾಲದು. you should make a mark and prove to people that you are not wrong in the choice of your career"

ನಾನು ಒಪ್ಪಿ ಅಂದು ಒಂದು ದೃಢ ಪ್ರತಿಜ್ಞೆ ಮಾಡಿ ಮಲಗಿದೆ, ಅಲ್ಲೋಲ ಕಲ್ಲೋಲದ ಮನೆಯ ಒಂದು ಮೂಲೆಯಲ್ಲಿ.

ಬೆಳಿಗ್ಗೆ ನನ್ನ ಎಬ್ಬಿಸಿದ್ದು ಅಮ್ಮ ಅಲ್ಲ, ನಮ್ಮ ತಂದೆಯ ಸ್ನೇಹಿತರು, ಅದೂ ಮುಂಜಾನೆ ಆರುವರೆಗೆ !

ನಾನು ಕಣ್ಣೂ ಬಿಟ್ಟಿರಲಿಲ್ಲ, ಅವರು ಮಾತು ಆರಂಭಿಸಿದ್ದರು. " ತಲೆ ಕೆಟ್ಟಿದ್ಯಾ ನಿನಗೆ? ಬಿ.ಎಸ್ಸಿ ಮಾಡ್ತೀಯಂತೆ ! ಬಿ.ಎಸ್ಸಿ ಆದ್ಮೇಲೆ ಕೆಲಸ ಎಲ್ಲಿ ಸಿಕ್ಕತ್ತೆ ? ಕೆಲಸ ಸಿಗೋದು ಬಿ.ಇ. ಓದಿದರೇನೇ ! ನೀನು ನಿನ್ನ ಕಾಲ ಮೇಲೆ ನಿಂತುಕೊಳ್ಳುತ್ತೀಯೋ ಅಥವಾ ನಿಮ್ಮ ತಂದೆ ತಾಯಿಗೆ ಭಾರವಾಗಿರುತ್ತೀಯೋ ? " ಆಮೇಲೆ ನಮ್ಮ ತಂದೆಯ ಕಡೆ ತಿರುಗಿ " ಸಾರ್, ಹುಡುಗು ಬುದ್ಧಿ, ಏನೇನೋ ಹೇಳತ್ವೆ...ನನ್ನ ಮಗಳು ಚಿತ್ರಕಲಾ ಪರಿಷತ್ ಸೇರ್ತಿನಿ ಅಂತ ಕೂತಿದ್ಲು, ಬೈದು ಎಂಜಿನೀರಿಂಗ್ ಕೌನ್ಸೆಲ್ಲಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದೀನಿ ನಾಳೆ. ನಿಮ್ಮ ಮಗಳದ್ದು ಆಚೆ ನಾಡಿದ್ದಂತೆ...ಕರ್ಕೊಂಡು ಹೋಗಿ ಮೆಡೀಸನ್ನೋ ಎಂಜಿನೀರಿಂಗೋ ಕೊಡಿಸಿ, ಹೀಗೆ ಬಿಡಬೇಡಿ" ಅಂತು ಉಸಿರು ತೆಗೆದುಕೊಳ್ಳಲು ಮಾತು ನಿಲ್ಲಿಸಿದರು.

ಆಗ ಬಾಯ್ಬಿಟ್ಟೆ ನಾನು- " ಅಂಕಲ್, ನಾನು ಬಿ.ಎಸ್ಸಿ ನೇ ಮಾಡೋದು"
ಅವರು: " ಈ ಪುರುಷಾರ್ಥಕ್ಕೆ CET ಯಾಕೆ ಬರೆದೆ ?ಸಾಲದ್ದಕ್ಕೆ AIEEE. ಎಲ್ಲದರಲ್ಲೂ ಒಳ್ಳೆ ranking ಬಂದಿದೆ ? "
ನಾನು : " ಪರೀಕ್ಷೆಗಳನ್ನು ಬರೆದು ನನ್ನ ಬುದ್ಧಿವಂತಿಕೆಯನ್ನು ಓರೆಗೆ ಹಚ್ಚಿ ನೋಡಿಕೊಳ್ಳುವುದು ನನ್ನ ಹವ್ಯಾಸ, ನನ್ನ ಚಿಕ್ಕಂದಿನ ಅಭ್ಯಾಸ. ಇದನ್ನೂ ಹಾಗೇ ಮಾಡಿದೆ. ನನ್ನ ಭವಿಷ್ಯದ ನಿರ್ಧಾರ ನಾನು ಆಗಲೇ ಮಾಡಿದ್ದೆ."
ಅವರು: "ನಿನ್ನ ತಲೆ ! ಈಗ ನೀನು ತೆಗೆದುಕೊಂಡಿರುವ ನಿರ್ಧಾರದಿಂದ ನೀನು ಮುಂದೆ ಪಶ್ಚಾತ್ತಾಪ ಪಡ್ತಿಯಾ ನೋಡಿಕೋ"
ನಾನೇನೂ ಹೇಳದೆ ಸುಮ್ಮನೆ ನಕ್ಕಿದ್ದೆ.

ಇದು ಫ್ಲಾಷ್ ಬ್ಯಾಕು.

ಈಗ ಮೊನ್ನೆ ಮೊನ್ನೆ ಅವರ ಮಗಳು ಸಿಕ್ಕಿದ್ದಳು. ಕೆಲಸದಲ್ಲಿ ದುಡ್ಡಿದ್ದರೂ ನೆಮ್ಮದಿಯಿಲ್ಲವೆಂದಳು. "ನೀನು ನೋಡು, ನಿನ್ನ ಇಷ್ಟದಂತೆಯೇ ನಿನ್ನ ಹಾದಿ ಹಿಡಿದೆ...ಈಗ ಪ್ರತಿಷ್ಟಿತ ಸ್ಥಳವೊಂದರಲ್ಲಿ research assistant ಆಗಿದ್ಯಾ...ನಿನ್ನ ಮುಖದಲ್ಲಿ ಒಂದು ತೃಪ್ತಿ ಕಾಣತ್ತೆ, ನನಗೆ ಅದೇ ಇಲ್ಲ. Art, craft , painting ಅಂದರೆ ಪ್ರಾಣ ನನಗೆ.ಮಾಡಲಾಗಲಿಲ್ಲ.ಛೇ ! ನಾನು ಗಲಾಟೆ ಮಾಡಿ ಅಪ್ಪ ಹೇಳಿದಂತೆ ಇದನ್ನು ಮಾಡುವ ಬದಲು ನಾನಂದುಕೊಂಡಿದ್ದನ್ನೇ ಮಾಡಬೇಕಿತ್ತು ."

"ಅಂಕಲ್ ಗೆ ಸಂತೋಷ ತಾನೆ ?" ಅಂತ ನಾನು ಕೇಳಿದ್ದಕ್ಕೆ ಅವಳು ಒಂದು ವಿಕಟ ನಗೆ ನಕ್ಕಳು.

ಹೀಗೆಯೇ ಬಹಳಷ್ಟು ಜನ ನನ್ನ ಬಳಿ ತಂತಮ್ಮ ದುಃಖ ತೊಡಿಕೊಂಡಿದ್ದಾರೆ. ಕೆಲವರು parental and peer pressure ಸಹಿಸಲಾಗದೇ ತಮ್ಮ ವೃತ್ತಿ ಹಿಡಿದಿದ್ದರೆ, ಕೆಲವರಿಗೆ ತಮ್ಮ ಕುಟುಂಬವನ್ನ ಸಂಭಾಳಿಸಬೇಕಾದ ಅನಿವಾರ್ಯತೆ ಇದೆ. ನನ್ನ ಪ್ರಶ್ನೆ ಇಷ್ಟೇ - ನಾವು ಇಷ್ಟ ಪಟ್ಟ ದಾರಿಯಲ್ಲಿಯೇ ನಡೆದು ಕುಟುಂಬವನ್ನು ಸಂಭಾಳಿಸಲು ಸಾಧ್ಯವೇ ಇಲ್ಲವೇ ?

ಇನ್ನು ಕೆಲವರು ಇಷ್ಟ ಪಟ್ಟೇ ಕೋರ್ಸಿಗೆ ಸೇರಿ, ಮಾಡಿ, ನಂತರ core area ಬಿಟ್ಟು ಬೇರೆ ಕಡೆ ಸ್ಥಾಪಿತರಾಗಿ, "I made a wrong choice in finding out my core area of interest" ಎಂದು ಅನುಭವಾಮೃತಸಾರವನ್ನು ನುಡಿದಿದ್ದಾರೆ.

ಇನ್ನು ಕೆಲವರು ಏನೋ ಓದಿ, ಇನ್ನೇನೋ ಆಗಿ, ಎರಡೂ ಫಲಕಾರಿ ಆಗದೇ," ಏನೋ ಮಾಡಲು ಹೋಗಿ...ಏನು ಮಾಡಿದೆ ನಾನು ?" ಅಂತ ತಮ್ಮನ್ನೇ ಪ್ರಶ್ನಸಿಕೊಳ್ಳುತ್ತಾ ಹಾಡುತ್ತಿದ್ದಾರೆ.

ಮತ್ತೊಂದಿಷ್ಟು ಜನ "I consider this choice as a step to something else. I wanted to learn something in this field, I learnt it. Now I use this career option to go to another field." ಅಂತ ಅಂದು ಸಂಬಂಧವೇ ಎರಡು ವೃತ್ತಿಯಲ್ಲಿ ಸೇತುವೆ ಹುಡುಕುತ್ತಿರುತ್ತಾರೆ. ನಾನೂ ಇವರ ಮಾತನ್ನು ಒಪ್ಪುತ್ತೇನೆ. ಆದರೆ ಇದು ಯಾಕೋ "jack of all trades, master of none"ಅಂತೆ ಆಗಲಿಲ್ಲವೇ ?

ಇನ್ನು ಕೆಲವರು ಸ್ಕೋಪ್ ಇದೆಯೆಂದು ಓದಿರುತ್ತಾರೆ.They would have seen many people climbing the ladder of success under that scope. ಆದರೆ ಅವರಿಗೆ ಕೆಲಸ ಸಿಗುವ ಹೊತ್ತಿಗೆ ಆ ಸ್ಕೋಪು ಸೋಪಿನಲ್ಲಿ ತೊಳೆದಂತಾಗಿ ಕೊಚ್ಚಿಕೊಂಡು ಹೊರಟುಹೋಗಿರುತ್ತದೆ. ಹೆನ್ರಿ ಫೋರ್ಡ್ ಗೆ ಯಾರೋ ಒಬ್ಬರು ಹೇಳಿದರಂತೆ- " I am climbing the ladder of success" ಅಂತ. ಅದಕ್ಕೆ ಅವರು ಉತ್ತರಿಸಿದರಂತೆ - "Make sure the ladder is leaning on the right wall!" ಅಂತ !

ಸ್ಕೋಪು ಸ್ಕೋಪೆಂದು ಕುಣಿದಿದ್ದಕ್ಕೆ rat race ಆರಂಭವಾಯ್ತು. ಕಾಂಚಾಣ ಎಲ್ಲರನ್ನೂ ಕುರುಡು ಮಾಡಿತು. ಪೊರೆ ಸರಿಯುವ ಹೊತ್ತಿಗೆ ತಡವಾಗಿ ಹೋಯ್ತು. Years have passed...and it is an irreversible damage.

ಜನ ಕೆಲವ ವಿಷಯಗಳನ್ನು ಯೋಚನೆ ಮಾಡಲೇ ಇಲ್ಲ.

ರೈತನೊಬ್ಬ ತಾನು ಬೆಳೆವ ಧಾನ್ಯಕ್ಕೆ ಸ್ಕೋಪೆಲ್ಲಿದೆ ಅಂತ ಹಿಂದೆ ಯೋಚಿಸಿದ್ದಿದ್ದರೆ ನಮ್ಮ ಪೂರ್ವೀಕರಿಗೆ ಧಾನ್ಯ ಸಿಗುತ್ತಿರಲಿಲ್ಲ. ಈಗ ಯೋಚನೆ ಮಾಡತೊಡಗಿದ್ದಾನೆ, ಬೆಲೆಗಳು ಗಗನಕ್ಕೆ ಏರತೊಡಗಿದೆ.

ಬಾಟ ಕಂಪನಿಯವರು " ಚಪ್ಪಲಿಗೆ ಸ್ಕೋಪೆಲ್ಲಿದೆ ?" ಎಂದಿದ್ದರೆ ಇಂದು ಪ್ರಪಂಚದಾದ್ಯಂತ ಷೋ ರೂಂ ಗಳು ಇರುತ್ತಿರಲಿಲ್ಲ.

ನಮ್ಮ ಅಧ್ಯಾಪಕರು - " ಟೀಚಿಂಗ್ ಗೆ ಎಲ್ಲಿದೆ ಸ್ಕೋಪು ?" ಅಂತ ಕೇಳಿದ್ದಿದ್ದರೆ ನಮಗೆ ಪಾಠಗಳು ಕೇಳಸಿಗುತ್ತಿರಲಿಲ್ಲ. ಈಗ ಕೇಳ ತೊಡಗಿದ್ದಾರೆ, ಅದಕ್ಕೆ ಟ್ಯೂಷನ್ನಿನ ರೇಟು ಜಾಸ್ತಿಯಾಗಿದೆ.

ಯಾರೋ ಮಾಡಿದ ವರ್ಣ ಚಿತ್ರವನ್ನು ಲಕ್ಷಗಟ್ಟಲೆ ಕೊಟ್ಟು ಕೊಂಡುಕೊಳ್ಳುತ್ತಾರೆ, ಆದರೆ ತಮ್ಮ ಮಕ್ಕಳು ಬಿಡಿಸಿದ ಚಿತ್ರವನ್ನು ತಿಪ್ಪೆಗೆಸೆಯುತ್ತಾರೆ.

ಸಂಗೀತ ಧ್ವನಿ ಸುರುಳಿಗಳನ್ನೆಲ್ಲಾ ಕಲೆಕ್ಟ್ ಮಾಡಿ, ಐಪಾಡ್ ತುಂಬೆಲ್ಲಾ ಸಂಗೀತ ಫೈಲುಗಳನ್ನು ತುಂಬಿಸಿಕೊಂಡವರು ಅವರ ಮಕ್ಕಳು ಹಾಡುತ್ತೇವೆಂದಾಗ ಕಿವಿ ಮುಚ್ಚಿಕೊಂಡು " ಕೆಲಸಕ್ಕೆ ಬಾರದ ವಿದ್ಯೆ" ಎಂದು ಮೂಗುಮುರಿಯುತ್ತಾರೆ.

ತಾಜ್ ವೆಸ್ಟೆಂಡು, ಲೀ ಮೆರಿಡಿಯನ್ ನಲ್ಲಿ ಊಟವನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ತಮ್ಮ ಮಗ chef ಆಗ್ತಿನಿ ಅಂದರೆ butlers' knife ನಲ್ಲಿ ಚುಚ್ಚಿಕೊಂಡು ಪ್ರಾಣ ಬಿಡ್ತಿವಿ ಅಂತ ಹೆದರಿಸುತ್ತಾರೆ !

ರಾಜ್ ಕುಮಾರ್ ನನ್ನು ಹೊಗಳುವ ಇವರು ತಮ್ಮ ಮಗ ನಾಟಕ ಮಾಡುತ್ತಾನೆ ಅಥವಾ ಮಗಳು ನಾಟ್ಯ ಮುಂದುವರೆಸುತ್ತೇನೆ ಅಂದರೆ ಕಾಲು ಮುರಿಯುತ್ತೇನೆ ಅನ್ನುತ್ತಾರೆ.

ಮಕ್ಕಳ ಇಷ್ಟಕ್ಕೆ ಸಹಮತ ಕೊಟ್ಟು ಅವರನ್ನು ಹುರಿದುಂಬಿಸಿ, ಧೈರ್ಯ, ಛಲ ತುಂಬಬೇಕಿರುವುದು ಪಾಲಕರ ಕರ್ತವ್ಯ. ಅದನ್ನ ಬಿಟ್ಟು " ನನ್ನಿಷ್ಟದಂತೆಯೇ ಆಗಬೇಕು." ಅನ್ನುವುದು ದುರಂತ !ಶಾಶ್ವತ ನೆಮ್ಮದಿ ಮುಖ್ಯಾನೋ, ಅಥವಾ ಹಲುಬುತ್ತಾ ದುಡಿದು ದುಡ್ಡು ತಂದು ಹಾಕುವುದು ಮುಖ್ಯವೋ ಆ ಆಯ್ಕೆ ಮಕ್ಕಳಿಗೆ ಬಿಟ್ಟಿದ್ದು.

ಈಗ ದ್ವಿತೀಯ ಪಿಯೂಸಿ ಪರೀಕ್ಷೆ ನಡೆಯುತ್ತಿದೆ. "Engineering ಗೆ ಸ್ಕೋಪಿಲ್ಲ" ಅಂತ ಈಗ ಜನ ಪಿಸುಗುಡುತ್ತಿದ್ದಾರೆ. ಈ ಸ್ಕೋಪಿನ ಆಚೆಗೂ ಜೀವನವಿದೆ ಎಂದು ಪಾಲಕರಿಗೆ ಮೊದಲು ದರ್ಶನವಾಗಬೇಕಿದೆ. ಅದನ್ನು ಅವರು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇದೆ.

ಸಮಾಜದಲ್ಲಿ ಅಸಮತೋಲನ ಉಂಟಾಗಿರುವ ಈಗಿನ ಸಮಯದಲ್ಲಿ ನಾವೆಲ್ಲರೂ ನಾವು ಆರಿಸಿಕೊಂಡಿರುವ ವೃತ್ತಿಯ ಬಗ್ಗೆ ಯೋಚನೆ ಮಾಡಬೇಕಿರುವುದು ಉಚಿತ ಅಂತ ಅನಿಸುವುದಿಲ್ಲವೇ ? ಅದು ಬಿಟ್ಟು, " ಸ್ಕೋಪ್" ಹಿಂದೆ ಹೊರಟರೆ ಪ್ರಯೋಜನ ಇದೆಯೇ ?

ನಾವೇಕೆ ಹೀಗೆ ?