Monday, December 31, 2007

ಹೊಸ ವರ್ಷದ ಆಗಮನ (?)

ಭೂಮಿ ಸೂರ್ಯನ ಸುತ್ತ 2007 ಸಲ ಗಿರ್ಕಿ ಹೊಡೆದಿದ್ದಾಯಿತು ಎಂದು ಸಂಭ್ರಸುತ್ತಿದೆ ಲೋಕ!(ನಾವು ಎಣಿಸಲು ಪ್ರಾರಂಭಿಸಿದಮೇಲೆ ಅಂತ ಇಟ್ಕೊಳ್ಳಿ. ನಿಜವಾಗಿಯೂ ಹೇಳಬೇಕೆಂದರೆ ಭೂಮಿ ಕಳೆದ ೧೪ ದಶಲಕ್ಷ ವರ್ಷಗಳಿಂದ ಗಿರ್ಕಿ ಹೊಡೆಯುತ್ತಲೇ ಇದೆ !) ಇವತ್ತು ಡಿಸೆಂಬರ್ 31.ಎಲ್ಲರು ಇವತ್ತು ರಾತ್ರಿ ಹನ್ನೆರಡರ ವರೆಗೂ ಕಣ್ಣಿಗೆ ಎಣ್ಣೆ ( ಕೆಲವರು ಹೊಟ್ಟೆಗೂ ಎಣ್ಣೆ )ಬಿಟ್ಟುಕೊಂಡು, ಹೊಸ ವರ್ಷ ಬಂತೆಂದು ಕಿರುಚಾಡಿ, ಪಟಾಕಿ ಹೊಡೆದು, (ಪ್ರಾಣಿಗಳನ್ನು ದಿಗಿಲುಗೊಳಿಸಿ,ಎಬ್ಬಿಸಿ ) ಸಂತೋಷಪಡುವ ಪ್ರತೀತಿಯಿದೆ. ಹೊಸ ವರ್ಷ ಬಂತೆಂದು ಸಂತೋಷ ಪಡುವುದು, ಸಂಭ್ರಮಿಸುವುದು ಇದರ ಉದ್ದೇಶಗಳೆಂದು ಬಾಹ್ಯವಾಗಿ ಕಂಡರೂ,ಅರ್ಧರಾತ್ರಿಯ ಈ ಆಡಂಬರದ ಆಚರಣೆ, ಅರಚಾಟದ ನಿಜವಾದ ಕಾರಣ ನನಗಂತೂ ಇನ್ನೂ ಸ್ಪಷವಾಗಿಲ್ಲ. ಬುದ್ಧಿವಂತರು ಈ ಹೊಸ ವರ್ಷವು ಗ್ರೆಗರಿಯನ್ ಪದ್ಧತಿಯದ್ದು ಎಂದು ಹೇಳಿ,12.00 ಗಂಟೆ ಇಂದ ಬೆಳಗ್ಗೆ ಎಂಬುದು ಕಾಲ ನಿಯಮವೆಂದು ಹೇಳುವರು. ಎಲ್ಲವನ್ನು ಒಪ್ಪೋಣ. ಆದರೂ ಈ ನಿಶಾಚರರ ಸಂಸ್ಕೃತಿಯ ಬಗ್ಗೆ ನನಗೆ ಹೆಚ್ಚು ಸಮ್ಮತಿಯಿಲ್ಲ. ರಾತ್ರಿ ಹನ್ನೆರಡು ಗಂಟೆಯ ಬದಲು ಸೂರ್ಯನ ಪ್ರಥಮ ಉಷಾಕಿರಣದ ದರ್ಶನದ ನಂತರ ಆಚರಿಸಬಾರದೇಕೆ ? ಸೂರ್ಯನ ಉದಯ ಭೂಮಿಯಲ್ಲಿ ಒಂದೆ ಸಮನೆ ಆಗುವುದಿಲ್ಲ ಎಂದು ಅಲ್ಲಗಳೆಯುವ ಮಹಾನುಭಾವರು 12.00 ಗಂಟೆಯೂ ಭೂಮಿಯಲ್ಲಿ ಸಮನಾಗಿಲ್ಲವೆಂದು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಮಾನವನಿಗೆ ಜ್ಞಾನಸದೃಶ ಆದಿತ್ಯನಿಗಿಂತ ಅಜ್ಞಾನರೂಪ ಅಂಧಕಾರವೇ ಹೆಚ್ಚು ಪ್ರಿಯವೋ ?

ಇನ್ನು ಹೊಸ ವರ್ಷದ ಸಂಕಲ್ಪ (New year resolution).ಅಲ್ಲ, ನಾವು ಯಾವ ದಿನವನ್ನು ಆಧಾರವನ್ನಾಗಿ ಇಟ್ಟುಕೊಂಡರೂ 365 ದಿನಗಳಾದ ಮೇಲೆ ಅದು ಹೊಸ ವರ್ಷವೇ !ನನ್ನ ಪ್ರಕಾರ ಪ್ರತಿ ದಿನವೂ ಹೊಸ ವರ್ಷದ ಆರಂಭವೇ !! ನಾವು ಪ್ರತಿದಿನವನ್ನು ಒಂದು ಹೊಸ ಸಂಕಲ್ಪದೊಂದಿಗೆ ಆರಂಭಿಸಬೇಕು. ಅದು ನಮ್ಮ ಉನ್ನತಿ ಮತ್ತು ಲೋಕದ ಉದ್ಧಾರದ ಉದ್ದೇಶವನ್ನು ಹೊಂದಿರಬೇಕು. ಇಂತಹ ಸಂಕಲ್ಪ ಮಾಡಲು ಜನವರಿ ಒಂದರವರೆಗೂ ಕಾಯಬೇಕೆ ? ಒಳ್ಳೆ ಕಾರ್ಯಗಳನ್ನು ಮುಂದೂಡುವ ಅವಶ್ಯಕತೆಯಿದೆಯೇ ? ಅಥವಾ ಇದನ್ನು ನಾವು ಅನಿವಾರ್ಯವನ್ನಾಗಿ ಮಾಡಿಕೊಂಡಿದ್ದೇವೆಯೇ ?

ಇರಲಿ, ನನ್ನ ಈ ಜಿಜ್ಞಾಸೆಗಳ ನಡುವೆಯೇ ಹೊತ್ತು ಜಾರುತ್ತಿದೆ.ಆದರೆ ನಾಳಿನ ಹೊಸ ದಿನದ ಆರಂಭಕ್ಕೆ ನಾನೇನೂ ಕೌತುಕಳಾಗಿಲ್ಲ. ಭೂಮಿಯಲ್ಲಿನ ಋತುಮಾನಗಳ, ವಿದ್ಯಮಾನಗಳ ಲೆಕ್ಕ ಇಡುವವರಿಗೆ ವರ್ಷಗಳ ಎಣಿಕೆ ಬೇಕು. ಆದರೆ ಭೂಮಿಯ ಜೊತೆಗೇ ಸುತ್ತುವವರಿಗೆ ಪ್ರತಿಯೊಂದು ದಿನವೂ ಹೊಸದೇ !! ನಾವೂ ಭೂಮಿಯೊಡನೆಯೇ ಸುತ್ತುತ್ತಿದ್ದೇವೆ ಎಂಬುದು ನಮಗೆ ಗೋಚರವಾದರೆ ಸಾಕು.ಆಗ ಈ ಡಂಬಾಚರಣೆಗಳೆಲ್ಲ ನಿರರ್ಥಕವೆಂದು ತಿಳಿಯಲು ಹೆಚ್ಚು ಸಮಯ ಬೇಕಿಲ್ಲ !

Saturday, December 15, 2007

ನಾದಮಯ

ನಾದಮಯ...........
ನಾದಮಯ ಈ ಲೋಕವೆಲ್ಲಾ

ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು
ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ.......
ನಾದಮಯ ಈ ಲೋಕವೆಲ್ಲಾ

ನಾದಮಯ.......

ಡಾ||ರಾಜ್ ಕುಮಾರ್ ಅವರು ಅದ್ಭುತವಾಗಿ ಹಾಡಿರುವ ಈ ಹಾಡಿನ ಹೊಸ ರೂಪ :(ಗಾಯಕರ ಮತ್ತು ರಚನೆಕಾರರ ಕ್ಷಮೆ ಕೋರಿ )
ನಾದಮಯ...ಈ ಲೋಕವೆಲ್ಲಾ...
mobile ಇಂದ car ಇಂದ ಎಲ್ಲೆಲ್ಲು ಬರುತಿರಲು
ತನುವ ಕುಣಿಸಿ ದಿಗಿಲು ತರಿಸಿ ಎಲ್ಲರ
ನಿದಿರೆ ಕೆಡಿಪ ಮನದ ಹಾಳು ಶೋಕಿಯಿದು
ನಾದಮಯಾ....

ಪ್ರಪಂಚವೇ ನಾದಮಯ ಎಂದು ಆಧ್ಯಾತ್ಮದಲ್ಲಿ ಹೇಳಲಾಗಿದೆ.ಆದರೆ ಮೊಬೈಲ್ ರಿಂಗ್ ಟೋನ್, ಮತ್ತು ಕಾರ್ ನ reverse horn ಶಬ್ದಗಳಂತಹ ಆನಂದ ತರದ ನಾದವು ಅತಿಯಾಗಿ ನಮ್ಮ ಮೆದುಳನ್ನೇ ಗೋಧಿ ಹಿಟ್ಟಿನ ತರಹ ನಾದುತ್ತಿರುವ ಹಾಗೆ ಭಾಸವಾಗುತ್ತದೆ. ಈಗಂತೂ ಎಲ್ಲರ ಬಳಿಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಎಲ್ಲ ಚಲನಚಿತ್ರ ನಿರ್ಮಾಪಕರೂ ತಮ್ಮ ಚಿತ್ರಕ್ಕೆ ಪ್ರಚಾರ ಕೊಡುವುದಕ್ಕೋಸ್ಕರ ತಮ್ಮ ಎಲ್ಲ ಚಿತ್ರದ ಹಾಡುಗಳನ್ನು ರಿಂಗ್ ಟೋನ್ ಮತ್ತು ಸಿಂಗ್ ಟೋನ್ ಗಳಾಗಿ ಮಾಡಿ ಎಲ್ಲರ ತಲೆ ಕೆಡಿಸಿದ್ದಾರೆ. ಏನೋ ಮುಖ್ಯವಾದ ವಿಷಯ ಮಾತಾಡಲು ಕರೆ ಮಾಡಿದರೆ..."ಮಾರ್ ಡಾಲ" ಎಂದು ಕೇಳಿಸುತ್ತದೆ. ದೇವಸ್ಥಾನದ ಪೂಜಾ ಸಮಯದಲ್ಲೂ ಮೊಬೈಲ್ !!! Vibrator mode ನಲ್ಲಿ ಮೊಬೈಲ್ ಶಬ್ದ ಮಾಡಿದಾಗ, ಮೈಯೇ ಅದರುತ್ತದೆ ! ಎಲ್ಲರ ಮುಂದೆ ಎದ್ದು ಹೋಗುವುದೇ ದೊಡ್ಡ fashion ಆಗಿ ಹೋಗಿದೆ ! ನಾವು ಕಂಡು ಹಿಡಿದ ವಸ್ತುಗಳಿಗೆ ನಾವೇ ಹೀಗೆ ದಾಸರಾಗುವುದು ಸರಿಯೇ ?ಮೊಬೈಲ್ ಅವಶ್ಯಕ ಹೌದು...ಆದರೆ ಅನಿವಾರ್ಯ ಅಲ್ಲ.

ಇನ್ನು ಕಾರ್ ನ ರಿವರ್ಸ್ ಶಬ್ದ.ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿಗಳಾನ್ನು ಎಚ್ಚರಿಸಲು ಇದನ್ನು ಉಪಯೋಗಿಸುವುದು ಸರಿ. ಆದರೆ,ಮನೆಯಲ್ಲಿ ಕಾರ್ ಪಾರ್ಕ್ ಮಾಡುವಾಗ ಮತ್ತು ಕಾರ್ ಹೊರತೆಗೆಯುವಾಗ ಇದನ್ನು ಹಾಕುವ ಅವಶ್ಯಕತೆಯಾದರೂ ಏನು ? ನಮ್ಮ ಮನೆಯಲ್ಲಿ ಕಾರ್ ಇದೆ ಎಂದು ತೋರಿಸಿಕೊಳ್ಳುವುದಕ್ಕೇ ? ಅರ್ಧರಾತ್ರಿಯಲ್ಲಿ ಜನರೆಲ್ಲರೂ ನಿದ್ರಿಸುವಾಗ "ವಂದೇ ಮಾತರಮ್" ಎಂದು ರಾಷ್ಟ್ರದ ಗೀತೆಯನ್ನು ಕೇಳಿಸುವುದು ಎಷ್ಟರ ಮಟ್ಟಿಗೆ ಸರಿ ?ರಾಷ್ಟ್ರಗೀತೆಗೆ ಗೌರವವೇ ಇಲ್ಲದಿರುವುದು ಈ ದೇಶದ ದೊಡ್ಡ ದುರಂತ. S.P.Balasubramaniam , Cyrus broacha (MTV VJ)..ಇವರೆಲ್ಲರೂ ಇದರ ಬಗ್ಗೆ ಮಾತಾಡಿ ಇದನ್ನು ಖಂಡಿಸಿದ್ದಾರೆ. ಆದರೂ ಜನರಲ್ಲಿ ಇನ್ನೂ ವಿವೇಕದ ರಿಂಗ್ ಟೋನ್ ಜಾಗೃತವಾಗಿ ರಿಂಗಣಿಸದಿರುವುದು ತೀರಾ ವಿಪರ್ಯಾಸ.

Monday, December 10, 2007

ಅಕ್ರಮ - ಸಕ್ರಮ

ಭಾನುವಾರ ಬೆಳೆಗ್ಗೆ ತಿಂಡಿ ತಿನ್ನುತ್ತ ದಿನಪತ್ರಿಕೆಯಲ್ಲಿನ ಸಮಾಚಾರದ ಬಗ್ಗೆ ನಮ್ಮ ಮನೆಯ dining table ನಲ್ಲಿ ಸಖತ್ತಾದ ಬಿಸಿ ಚರ್ಚೆ ನಡಿಯುತ್ತಿತ್ತು. ನಮ್ಮ ತಂದೆ ಅಕ್ರಮ- ಸಕ್ರಮದ ಬಾಯಿಗೆ ಸಿಲುಕಿರುವ ಕಟ್ಟಡಗಳ ಬಗ್ಗೆ ಮಾತನಾಡುತ್ತಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೊಕ್ಕಸಕ್ಕೆ ತುಂಬಿರುವ ಹಣದ ರಾಶಿ, ಅದರಿಂದ ಆಗಬಹುದಾದ ಆಯ-ವ್ಯಯಗಳು, ಅನುಕೂಲ-ಪ್ರತಿಕೂಲಗಳು, ನ್ಯಾಯಾಲಯದಿಂದ ರಾಜ್ಯಪಾಲರಿಗೆ, ರಾಜ್ಯಪಾಲರಿಂದ ನ್ಯಾಯಾಲಯಕ್ಕೆ ಚೆಂಡಂತೆ ಹೊರಳಾಡುತ್ತಿರುವ ತೀರ್ಪು,ಇವೆಲ್ಲದರ ಬಗ್ಗೆ ಮಾತಾಡುತ್ತಿದ್ದರು. ನಮ್ಮಮ್ಮ ದೊಡ್ಡ ದೊಡ್ಡ ಮನೆಗಳನ್ನ ಕಟ್ಟಿಸಿ,ಸಿಕ್ಕಾಪಟ್ಟೆ ಹಣ ವ್ಯಯಿಸಿ interior design ಮಾಡಿದ್ದೆಲ್ಲಾ demolish ಮಾಡಿದಾಗ waste ಆಗಿಹೋಗತ್ತಲ್ಲ,ಅದನ್ನ ಎಷ್ಟು ಆಸೆ ಅಕ್ಕರೆ ಆಸ್ಥೆ ಇಂದ ಕಾಪಾಡಿರುತ್ತೀವಿ,ಅಂತ ಯೋಚನೆ ಮಾಡ್ತಿದ್ರು...ನನಗೆ ನಾನು ಓದಿದ ಒಂದು ರಷ್ಯನ್ ಕಥೆ ನೆನಪಾಯಿತು.ನಮಗೆ ಬಿ.ಎಸ್ಸಿ ನಲ್ಲಿ ಇಂಗ್ಲೀಷ್ ಪಾಠವೊಂದಿತ್ತು. "How much land does a man need ? " ಅಂತ ಆ ಕಥೆಯ ಶೀರ್ಷಿಕೆ.ರಷ್ಯಾದ ಪುಟ್ಟ ಹಳ್ಳಿಯಲ್ಲಿನ ಒಬ್ಬ ಸಣ್ಣ ರೈತ,ಹೆಚ್ಚು ಹಣದ ಆಸೆಗಾಗಿ, ಇದ್ದ ಸಣ್ಣ ಜಮೀನು ಮತ್ತು ಮನೆಯನ್ನು ಮಾರಿ, ಕಾಡು ಜನರ ಬಳಿಗೆ ಹೋಗಿ ಕಾಡಿನ ಸ್ವಲ್ಪ ಭಾಗವನ್ನು ನೀಡಲು ಬೇಡಿಕೊಳ್ಳುತ್ತಾನೆ. ಅವರು ಒಂದು ಗುಡ್ಡದ ತಪ್ಪಲಿಗೆ ಕರೆದುಕೊಂಡು ಹೋಗಿ, ಸೂರ್ಯೋದಯದಿಂದ ಸೂರ್ಯಾಸ್ತವಾಗುವ ವರೆಗೆ ನೀನು ಎಲ್ಲೆಲ್ಲಿ ಹೋಗಿ ನಿನ್ನ ನೇಗಿಲಿನಿಂದ ರೇಖೆ ಹಾಕುವೆಯೋ, ಆ ಕಾಡಷ್ಟೂ ನಿನ್ನದೇ ಎನ್ನುತ್ತಾರೆ. ಊಟ ಮಾಡದೆ,ನಿದ್ದೆ ಲೆಖ್ಖಿಸದೇ, ಆ ರೈತನು ಓಡಿ ಓಡಿ 80 ಎಕರೆ ಸಂಪಾದಿಸಿ ಇನ್ನೇನು ಸೂರ್ಯಾಸ್ತವಾಗ್ಬೇಕು ಅನ್ನುವ ಹೊತ್ತಿಗೆ ಮತ್ತೆ ಆ ಗುಡ್ಡದ ತಪ್ಪಲಿಗೆ ಬರುವಷ್ಟರಲ್ಲಿ ನಿತ್ರಾಣವಾಗಿ ಬಿದ್ದು ಪ್ರಾಣ ಕಳೆದುಕೊಂಡಿರುತ್ತಾನೆ. ಕೊನೆಗೆ ಅವನನ್ನು ಅದೇ ಕಾಡಿನಲ್ಲಿ 6 ಅಡಿ ಉದ್ದ,3 ಅಡಿ ಅಗಲದ ಗುಂಡಿಯೊಂದರಲ್ಲಿ ಹೂಳಲಾಗುತ್ತದೆ.

ನಾವು ಈ ಮಹಾನಗರದಲ್ಲಿ ಒಂದು ನಿವೇಶನಕ್ಕಾಗಿ ಪರದಾಡುವುದೂ ಹೀಗೆಯೇ ಅಲ್ಲವೆ ? ಮನೆಯೊಂದನ್ನು ಕಟ್ಟಿ, ಗೃಹಪ್ರವೇಶ ಮಾಡಿ, ಬಂಧು ಬಾಂಧವರನ್ನೆಲ್ಲ ಸಂತೃಪ್ತಿ (?)ಪಡಿಸುವಷ್ಟರಲ್ಲಿಯೇ ಸಾಕಾಗಿ ಹೋಗಿರುತ್ತದೆ.ಆಮೇಲೆ,ನಾವು ಕಟ್ಟಿಸಿರುವ ಮನೆಯನ್ನು ಕಾಪಾಡುವುದೇ ಹರಸಾಹಸವಾಗಿಬಿಡುತ್ತದೆ. ನಮ್ಮ ಅಮ್ಮ ಒಂದು ಮಾತು ಹೇಳಿದರು ಮೊನ್ನೆ.ನನಗೆ ಅದು ತುಂಬಾ ನಿಜವೆನಿಸಿತು. "30x40 ನೆಲದಲ್ಲಿ ನಾವು ಇಂದ್ರಪ್ರಸ್ಥ ಅರಮನೆಯನ್ನು ಕಟ್ಟಲು ಸಾಧ್ಯವೇ? ಅಂತಸ್ತುಗಳನ್ನು ಮೇಲಕ್ಕೇರಿಸಿದಷ್ಟು ನಮ್ಮ ಕಾಲು ನೋವು ಜಾಸ್ತಿಯಾಗುತ್ತದೆ.ವಯಸ್ಸಾದ ಮೇಲೆ ನಮಗೆ glazed tiles ಬೇಕಿಲ್ಲ, bath tub ಬೇಕಿಲ್ಲ, ಬೇಕಿರುವುದು ಒಂದು ಸಣ್ಣ ಕೋಣೆಯಷ್ಟೇ !".

ಇಂದ್ರಪ್ರಸ್ಥದ ಐಷಾರಾಮಿಗೆ ಇಂಬು ಕೊಟ್ಟಿದ್ದಕ್ಕೆ ಈ ಅಕ್ರಮ ಕಟ್ಟಡಗಳು ಅವತರಿಸಿದ್ದು.ಗಾಳಿ ಬೀಸಲು ಎರಡು ಅಡಿಯನ್ನು ಬಿಡದಷ್ಟರ ಮಟ್ಟಿಗೆ ನಾವು ಧನಪಿಪಾಸಿಗಳು, ಮೋಹವಶರಾಗಿದ್ದೇವೆ. ದುಡ್ಡಿನಿಂದ ನಾವು ಏನನ್ನು ಸಕ್ರಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ ? ನಮ್ಮ ಈ ಅಕ್ರಮ ಆಸೆಗಳನ್ನೇ ? ನಿಯಮಗಳನ್ನು ಪಾಲಿಸದ ನಮ್ಮ ಮರ್ಕಟ ಮನೋಭಾವನೆಯನ್ನೇ ? ಅಥವಾ ಕೊಟ್ಟ/ ಪಡೆದ ಲಂಚದ ಅಪರಾಧೀ ಪ್ರಜ್ಞೆಯನ್ನೇ ? ಆಗಿರುವ ಅಕ್ರಮದ ಮೂಲ ಹುಡುಕಿದರೆ ಅದು ಸಿಕ್ಕೀತೇ ? ಮೂಲ corporation office ಓ ? ಅಥವಾ ನಮ್ಮ ಮನಸ್ಸೋ? ನಾವು ನೆಲಸಮಾಧಿ ಮಾಡಬೇಕಿರುವುದು ನಮ್ಮ ಮನೆಗಳನ್ನೋ ? ಅಥವಾ ನಮ್ಮ ಮನಸ್ಸಿನಲ್ಲಿರುವ ಅತಿಆಸೆಗಳನ್ನೋ ?

ಕಟ್ಟಡಗಳ ಮೇಲಿನ "ಅಕ್ರಮ" ತಲೆಬರಹ ಕಂಡಾಗಲೆಲ್ಲ ನನಗೆ "How much land does a man need ?" ನೆನಪಾಗುತ್ತದೆ.

Friday, December 7, 2007

ಏಕೀ ಕ್ರೌರ್ಯ ?

Exam tensionನಿಂದಲೋ,ಅಥವಾ ನನಗೆ ಆಸಕ್ತಿ ಇಲ್ಲವೋ ಎನೋ, ನಾನೆಂದೂ 4th block jayanagar ನ bus stop ಸರಿಯಾಗಿ ನೋಡೇ ಇರ್ಲಿಲ್ಲ. ನೆನ್ನೆ exam ಮುಗಿತಲ್ಲ,ಲೋಕವೆಲ್ಲಾ ಹೊಸದಾಗಿ ಕಾಣಿಸುತ್ತಿತ್ತು. ಚುಮು ಚುಮು ಛಳಿ,ತುಂತುರು ಮಳೆಯಲ್ಲಿ ನಡೆದು ಬರುತ್ತಾ ಅತ್ತಿತ್ತ ಕಣ್ಣಾಡಿಸಿದೆ. ಎಲ್ಲ ಕಡೆ ಹೊಸದಾಗಿ ಬಿಡುಗಡೆಯಾದ ಸಿನೆಮಾಗಳ ಭಿತ್ತಿ ಚಿತ್ರಗಳು ರಾರಾಜಿಸುತ್ತಿದ್ದವು. ಎಲ್ಲಾ ನಾಯಕರ ಕೈಯಲ್ಲೂ ಮಚ್ಚು, ಲಾಂಗುಗಳು. ಒಬ್ಬ ನಾಯಕನ ಕಣ್ಣುಗಳು ಎಷ್ಟು ಭಯಂಕರವಾಗಿತ್ತೆಂದರೆ,ನನಗೆ ಮಹಿಷಾಸುರನ ನೆನಪಾಯಿತು. ಮರುಕ್ಷಣವೇ ನಗೆಯೂ ಬಂತು. ಆ ಚಿತ್ರದ tag line ನಲ್ಲಿ ಇಲ್ಲಿ ಪ್ರೀತಿಯೆ ಎಲ್ಲಾ ಎಂಬ ಅರ್ಥವನ್ನು ಕೊಡುತ್ತಿತ್ತು. ಪ್ರೀತಿಸಲು ಕ್ರೌರ್ಯದ ಅವಶ್ಯಕತೆ ಇದೆಯೆ ?ರೌಡಿಯೊಬ್ಬ ಒಳ್ಳೆಯವನಾಗಿ ಪರಿವರ್ತನೆಗೊಳ್ಳುವ ಕಥೆಯೆಂದು ಈ ಚಿತ್ರದ ನಿರ್ಮಾಪಕರು ಸಾರಿ ಸಾರಿ ಹೇಳಿದರೂ ಈ ಚಿತ್ರದಲ್ಲಿನ ಕ್ರೌರ್ಯ ಮತ್ತು ಹಿಂಸೆಯೇ ಜನರಲ್ಲಿ ಉಳಿಯುತ್ತದೆ. ಇದನ್ನು ಯಾರೂ ಅಲ್ಲಗಳೆಯಲು ಆಗುವುದಿಲ್ಲ.

ಈಗೀಗ ಎಲ್ಲವೂ ಕ್ರೌರ್ಯಮಯವೇ ಆಗಿದೆ. ದೇಶ ದೇಶಗಳ ನಡುವೆ ಕ್ರೌರ್ಯ,ರಾಜ್ಯ ರಾಜ್ಯದ ನಡುವೆ ಕ್ರೌರ್ಯ, ಪೇಟೆಯ ಗಲ್ಲಿ ಗಲ್ಲಿಗಳಲ್ಲೂ ಕ್ರೌರ್ಯ ! ಈ ಕ್ರೌರ್ಯಕ್ಕೆ ಸಿನೆಮಾಗಳಲ್ಲಿ ವೈಭವೀಕರಣ ಬೇರೆ ! ಈಗೀಗ ಮಕ್ಕಳು, g i Jo, batman ಅಂತಹ cartoon ಗಳನ್ನು ನೋಡಿ ತಮ್ಮ ಸ್ನೇಹಿತರನ್ನು ನೋಯಿಸಲು ಪ್ರಯತ್ನಿಸುತ್ತಿದ್ದಾರೆ.video game ಗಳೂ ಸಹ ಇದಕ್ಕೆ ಪೂರಕವಾಗೇ ಇದೆ.ಇದನ್ನು ಮಕ್ಕಳಾಟವೆಂದು ಕಡೆಗಾಣಿಸಿದರೆ ಅದು ಮುಂದೆ ಖಂಡಿತಾ ಮಾರಕವಾಗುತ್ತದೆ.ಒಂದು ಕಾಲದಲ್ಲಿ ಮಕ್ಕಳಿಗೆ ಬಂದೂಕನ್ನು ತೆಗೆಸಿಕೊಟ್ಟು ತಮ್ಮ ಮಗು ದೇಶ ಕಾಯುವ ಸೈನಿಕನಾಗಲಿ ಎಂದು ಆಶಿಸುತ್ತಿದ್ದ ಪೋಷಕರು ಈಗ ತಮ್ಮ ಮಗ ರೌಡಿಯಾಗದೇ ಇರಲಿ ಎಂದು ಭಯಪಡುವ ಹಾಗಾಗಿದೆ. ಔಷಧಿಗಿಂತ ವಿಷವೇ ಮೈಯಲ್ಲಿ ಬೇಗ ಪ್ರವಹಿಸುವ ಹಾಗೆ, ಕ್ರೌರ್ಯ ಮತ್ತು ಹಿಂಸಾತ್ಮಕ ಮನೋಭಾವಗಳು ಮಕ್ಕಳು ಮತ್ತು ಯುವ ಜನರಲ್ಲಿ ಬೇಗ ವ್ಯಾಪಿಸುತ್ತಿದೆ.

ನಾಟಕಗಳಲ್ಲಿ ನವರಸಗಳೂ ಮೇಳೈಸಿ ಅದು ಎಲ್ಲರನ್ನು ರಂಜಿಸಿ, ಒಳ್ಳೆಯ ಸಂದೇಶಗಳನ್ನು ನೀಡಬೇಕೆಂದು ನಾಟ್ಯಶಾಸ್ತ್ರದಲ್ಲಿ ನಿಯಮಗಳಿವೆ. ಇದನ್ನು ಈಗ ಯಾರಾದರೂ ಪಾಲಿಸಿದ್ದಾರೆಯೇ ? ಹಿಂದೆ ಡಾ|| ರಾಜ್ ಕುಮಾರ್ ಅವರು ಮಾಡುತ್ತಿದ್ದ ಪ್ರತಿಯೊಂದು ಚಿತ್ರದಲ್ಲೂ ಈ ನಿಯಮವನ್ನು ಪಾಲಿಸಲಾಗುತ್ತಿತ್ತು. ಅಂದಿನ ಪೀಳಿಗೆಯವರು ಅವರನ್ನೇ ತಮ್ಮ ಆದರ್ಶವಾಗಿ ನೋಡಿದರು, ಅವರ ಸದ್ಗುಣಗಳನ್ನೇ ಮೈಗೂಡಿಸಿಕೊಂಡು ನಮ್ಮ ಪೀಳಿಗೆಗೆ ಅದನ್ನೇ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ನಾವು ಅವರು ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದೇವೆಯೇ ? ಉತ್ತರ ಎಲ್ಲರಿಗೂ ಗೊತ್ತೇ ಇದೆ.

ನಿಜವಾಗಲೂ ...ನಾವೇಕೆ ಹೀಗೆ ?

Wednesday, December 5, 2007

missed call ಮನೋಭಾವ

mobile phones ಬಂದಾಗಿನಿಂದ ನಮ್ಮ ಜೀವನದ ಶೈಲಿಯೇ ಬದಲಾಗಿದೆ.mobile phone ಇಲ್ಲ್ಲದೆ ಬದುಕಲಿಕ್ಕೆ ಸಾಧ್ಯವಾಗದಷ್ಟರ ಮಟ್ಟಿಗೆ ನಾವು ಅದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಇವತ್ತು ಬೆಳಿಗ್ಗೆ ತಾನೆ ಪ್ರಜಾವಾಣಿಯಲ್ಲಿ ಒಂದು ಅಂಕಣವನ್ನು ಓದಿದೆ. ಮನಸ್ಸಿಗೆ ಬಹಳ ಹಿಡಿಸಿತು. ಆದು mobile phone ಉಪಯೋಗದಿಂದ ನಮ್ಮ ಸೃಜನಶೀಲತೆಯು ಹಾಳಾಗುತ್ತಿದೆ ಎಂದು ಪ್ರತಿಪಾದಿಸುವ ಒಂದು ಅಂಕಣ.ಅದರ ಪಕ್ಕದಲ್ಲೆ ಒಂದು ಜಾಹೀರಾತನ್ನು ಸಹ ನೋಡಿದೆ. ಯಾವುದೋ ಒಂದು ದೂರವಾಣಿ ಕಂಪನಿಯೊಂದರ ಜೀವನವಿಡಿ phone ನಲ್ಲಿ ಮಾತನಾದುವ ಜಾಹೀರಾತು. ಆಗ ನನಗೆ ಹೊಳೆದದ್ದೆ ಈ missed call ವಿಷಯ.

ನಮ್ಮ ದುಡ್ಡು ಮಾತ್ರ ಮುಖ್ಯ, ಬೇರೆಯವರು ಖರ್ಚು ಮಾಡಿ ನಮಗೆ ಕರೆ ಮಾಡಲಿ ಎಂಬುದು ಎಷ್ಟರ ಮಟ್ಟಿಗೆ ಸಮಂಜಸ ? ಬೇರೆಯವರೇ ನಮಗೆ ಎಲ್ಲ ಮಾಡಲಿ ಎನ್ನುವ ಮನೋಭಾವ ಯಾಕೆ ?ಅವರಿಗೂ ಇದೆ ಮನೋಭಾವನೆ ಇರತ್ತೆ ಅಲ್ಲವೆ ?ನಮ್ಮ ಭಾವನೆಗಳಿಗೆ ಮಾತ್ರ ಬೆಲೆಯೇ ? ಬೇರೆಯವರ ಭಾವನೆಗೆ ಬೆಲೆಯೇ ಇಲ್ಲವೇ?ಇದನ್ನೆ ಕಂಪನಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತ, ಹಲವು ಯೋಜನೆಗಳನ್ನು ಗ್ರಾಹಕರಿಗೆ ನೀಡುತ್ತ ನಮ್ಮನ್ನು ಅದರ ಜಾಲದಲ್ಲಿ ಸಿಕ್ಕಿ ಹಾಕಿಸಿಕೊಂಡುಬಿಟ್ಟಿವೆ.ನಮ್ಮ network ಅಲ್ಲದ phone ಗೆ ಕರೆಯನ್ನು ಮಾಡಿದರೆ ಹೆಚ್ಚು ಬೆಲೆಯನ್ನು ತೆರಬೇಕಾಗುವ ಇಂಥಾ ಯೋಜನೆಗಳು ಕರೆಯ ಉದ್ದೇಶವನ್ನೇ ಮರೆತಂತಿದೆ. ಇದರಿಂದ ಅವರಿಗೆ ಲಾಭವಾಗುತ್ತಿರಬಹುದು, ಆದರೆ ಮನುಷ್ಯ ಸಂಕುಲದ ಭಾವನೆಗಳಿಗೆ ನಷ್ಟವಾಗುತ್ತಿದೆ ಅಲ್ಲವೆ? ನಾನೇಕೆ phone ಮಾಡಲಿ ? ಬೇಕಿದ್ದರೆ ಅವರೇ ಮಾಡಲಿ ಎಂಬ ಭಾವನೆ ಹುಟ್ಟಿದ್ದೆ ಈ ಯೋಜನೆಗಳಿಂದ.

ಹಿಂದೊಂದು ಕಾಲ ಇತ್ತು. ಪತ್ರಗಳಲ್ಲಿ ಮನಸ್ಸನ್ನೇ ಎಳೆ ಎಳೆಯಾಗಿ ಬಿಚ್ಚಿಹೇಳುತ್ತಿದ್ದ ಕಾಲವದು. ಈಗ, ಈ missed call ಗಳಲ್ಲಿ ನಮ್ಮ ಮನಸ್ಸೆಲ್ಲೋ miss ಆಗಿದೆ ಅಂತ ನನ್ನ ಅನಿಸಿಕೆ.